Tuesday, October 24, 2006

ಧಾರವಾಡದ ದತ್ತೂ ಮಾಸ್ತರ

`ಅಯ್ಯೋ...ಏಳ್ರೀ..ಘಾತ ಆಗೇದ...ನನ್ನ ಗಿಳಿ ಹಾರಿ ಹೋಗೇದ...' ದತ್ತೂ ಮಾಸ್ತರ ಬೆಚ್ಚಿ ಎದ್ದು ಕೂತರು.ಕೂಸು ಹತ್ತು ತಿಂಗಳು ಹೆತ್ತ ಕರಳುಗಳಿಗೆ ಖುಷಿ ಕೊಟ್ಟು ಗಿಳಿಯಂತೆ ಬಾಗಿಲು ತೆರೆದ ಪಂಜರದೊಳಗಿಂದ ಹಾರಿ ಹೋಗಿದ್ದ...

`ಅಣ್ಣಾ, ನೀವು ಮನೆಯೊಳಗ ಇರ್ರಿ ಸುಮ್ಮನೆ ಯಾಕ ಬರ್ತೀರಿ?' ಕಿರಿಯ ಮಿತ್ರರು ಹೇಳಿದರು `ಬರ್ತೇನ್ರಪ್ಪಾ, ಬರ್ರ್ತೀನಿ...ಇಲ್ಲದಿದ್ದರೆ ಋಣಸಂದಾಯ ಆಗೋದಿಲ್ಲ. ಬರ್ತೀನಿ...' ಎಂದು ಮಗುವಿನ ಮೆಚ್ಚುಗೆಯ ಮಫ್ಲರ್ ಹೊಚ್ಚುತ್ತಾ `ಆತನ ಪ್ರೀತಿಯ ಮಫ್ಲರ್ ಇದು ಬಹಳಾ ಪ್ರೀತಿಯಿಂದ ಹೊತ್ತುಕೊಳ್ಳುತ್ತಿದ್ದ' ಎಂದಾಗ ಯಾರೂ ಮಾತಾಡಲಿಲ್ಲ
ಪ್ರಮೋದಾನಂದ ತನ್ನ ಅಗಲಿಕೆಯಿಂದ ಒಂದು ಕವಿತೆಯಾಗಿ ಪುನರ್ಜನ್ಮ ತಾಳಿದ್ದ
ನೀನೊಂದೆ ಬಂದೆ ಬಂದಂದಿನಂದೆ,ಒಂದೊಂದೆ ಚೆಂದ
ಬಿಸವಂದಾ/ ಪ್ರಮೋದಾ/
ನಿನ್ನೊಡನೆ ಭೋಗ,ನಿನ್ನೊಡನೆ ರೋಗ,ನಿನ್ನೊಡನೆ ಯೋಗ
ಎಲೆ ಕಂದಾ/ ಆನಂದಾ/
ಎಂದು ಬರೆಯಿಸಿಕೊಂದ ಮಸಣ ಗೀತ ಮುಂದರಿಯುತ್ತಾ-

ಮಾತಾಯಿ ಕೃಪೆಯು ಸಿರಿಗುರುವಿನರುಳು ಕರುಳಾಗಿ ಪೂರೆಗೆ
ದಯೆಯಿಂದ ಪ್ರಮೋದಾ/
ಈ ಚರಮ ಗೀತವೆ ಪರಮ ಗೀತ ಪ್ರಾಥನೆಯ ರೂಪ
ನನ್ನಿಂದ/ ಆನಂದಾ/...

ಎಂದು ಸಾಗುತ್ತಾ ಮಸಣ ಗೀತ ಮಣ್ಣಿನೊಡನೆ ಮುಕ್ತಾಯಗೊಂಡಿತ್ತು...

ಅಂದು ಸಂಜೆ ಶ್ರೀರಾಮ ಯಾಕೋ ಚಳಿ ಚಳಿ ಎಂದು ಹೊದ್ದುಕೊಂಡು ಮಲಗಿಬಿಟ್ಟಿದ್ದ...`ಅಣ್ಣಾ,ಗಾಭರಿ ಆಗಬ್ಯಾಡ್ರೀ,ನನ್ನದು ತಪ್ಪಗೆದಾ' ಎಂದು ಶ್ರೀರಾಮ ಕೈಜೋಡಿಸಿದಾಗ ತಂದೆಯ ಹೃದಯ ಕಲ್ಲುಸಕ್ಕರೆಯಂತೆ ಕರಗಿ ಹೋಗಿತ್ತು... ಜ್ವರ ತರಿಸಿಕೊಂಡಿದ್ದೇ ತನ್ನ ತಪ್ಪು ಎಂದು ರಾಮ ಮಾತಾಡಿದ್ದನ್ನು ತಡೆದುಕೊಳ್ಳಲಿಕ್ಕೆ ಅಣ್ಣಾ ಅವರಿಗೆ ಸಾದ್ಯವಾಗಲಿಲ್ಲಾ...

ಎರಡು ವಾರ ಪೂರಾ ದಾಟಿರಲಿಲ್ಲಾ ಒಂದು ನಸುಕಿನಲ್ಲಿ ಆಕಾಶದಲ್ಲಿ ಶುಕ್ರ ಕಾಣಿಸಿಕೊಳ್ಳುತ್ತಿದ್ದಂತೆ, ಕವಿತಂದೆಯ `ಗಂಗಾವತರಣದ' ಪ್ರೆಸ್ ಕಾಪಿ ತಯಾರಿಸಿಟ್ಟಿದ್ದ ಈ ಪ್ರತಿಭಾಂಕುರವು ಆ ಶುಕ್ರನತ್ತ ಧಾವಿಸಿತ್ತು!ರಾಮನೂ ಕೆಲವು ಕವಿತೆಗಳನ್ನು ರಚಿಸಿ ತಂದೆಯ ಶಭಾಸ್ ಗಿರಿ ಪಡೆದು ತಂದೆಗೇ ಅವನ್ನು ಅರ್ಪಿಸಿ ತೆರಳಿದ್ದ!

ಈ ಸಲ ಮಸಣದ ಮೆರವಣಿಗೆ ದೊಡ್ಡಪ್ರಮಾಣದ ಮೇಲೆ ನಡೆದಿತ್ತು.ದಾರಿಯಲ್ಲಿ ಪರಿಚಿತರೊಬ್ಬರು ದತ್ತೂ ಮಾಸ್ತರರನ್ನು ಕಂಡು ಬೆರಗುಪಟ್ಟು ಮಾತಾಡಿಸಿದಾಗ `ಹೂಂ..ಮೊನ್ನೆ ಎಲ್ಲಾರೂ ಸಣ್ಣವನನ್ನು ಮಣ್ಣು ಮಾಡಲು ಹೋಗಿದ್ವಿ..ಇವತ್ತ ಈ ಹಿರೇಮಗನ್ನ ಅವನ ಜೋಡಿ ಮಾಡಿಟ್ಟು ಬರಲಿಕ್ಕೆ ಹೊರಟೀವಿ ಇಬ್ಬರೂ ಒಬ್ಬರಿಗೊಬ್ಬರು ಭಾಳ ಜೀವ! ಅವ ಭೂಮ್ಯಾಗ,ಇವಾ ಬೂದ್ಯಾಗ' ಎಂದು ಒರಟ ಶಬ್ದಗಳಲ್ಲಿ ಹೊರಟ ಆ
ಮಾತುಗಳು ಕವಿಹೃದಯವೇ ಒಂದು ಜ್ವಾಲಾಮುಖಿಯಾಗಿತ್ತೆಂಬುದನ್ನು ಹೇಳುವಂತಿದ್ದವು...ಮನೆಯೇ ಮಸಣದ ಆವರಣ ಹೊದ್ದುಕೊಂಡಿತ್ತು ಮನೆ ಯಾವುದು ಮಸಣ ಯಾವುದು ತಿಳಿಯದಂತಾಗಿತ್ತು....

ಎನ್ಕೆ ಅವರು ಕನ್ನಡದ ವರಕವಿ ದ.ರಾ.ಬೇಂದ್ರೆ ಯವರ ಬಗ್ಗೆ ಬರೆದಿರುವ ಕಾದಂಬರಿ `ಧಾರವಾಡದ ದತ್ತೂ ಮಾಸ್ತರ' ಪುಸ್ತಕವನ್ನು ನೆನ್ನೆ ಕೈಗೆತ್ತಿಕೊಂಡಿದ್ದು ಮುಗಿಸದೇ ಕೆಳಗಿಡಲಾಗಲಿಲ್ಲ.ಸರಿರಾತ್ರಿಗೆ ಓದಿಮುಗಿಸಿ ಮಲಗಿದಾಗ ಕಣ್ಣಿಗೆ ನಿದ್ದೆ ಹತ್ತಲಿಲ್ಲ...

2 Comments:

Anonymous Anonymous said...

ಮಾಲಾ, ನಮ್ಮ ಚಿಂತನೆಗಳಿಗೆ ನಿಲುಕದ ಅಸಾಧ್ಯ ನಿಲುವಿನ ಸಂತ ಜೀವ ಬೇಂದ್ರೆ. ಅವರ ಬಗ್ಗೆ, ಅವರ ಜೀವನದ ಬಗ್ಗೆ, ಅವರ ಬೇಗುದಿಗಳ ಬಗ್ಗೆ ಬರೆದಷ್ಟೂ ಮುಗಿಯಲಾರದು. ಎಲ್ಲದರಲ್ಲೂ ಏನೋ ಒಂದು ಅರ್ಥ ಕಂಡುಕೊಂಡು ಸಮಾಧಾನ ಹುಡುಕಿಕೊಳ್ಳುತ್ತಿದ್ದ ಅವರ ಪಾರಮಾರ್ಥಿಕ ನಿಲುವು.... ಅನುಕರಣೀಯ; ಆದರೆ, ನಮ್ಮಂಥ ಭೌತಿಕ-ಜೀವಿಗಳಿಗೆ ಕಷ್ಟ ಸಾಧ್ಯ.

ಒಳ್ಳೆಯ ಪುಸ್ತಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

3:44 PM  
Blogger Satish said...

'ನೀ ಹೀಂಗ ನೋಡಬ್ಯಾಡಾs ನನ್ನ...' ಕವನ ಓದಿದ್ರ ಇಂಥದಾ ಒಂದು ಭಾವನಿ ಹೊರಬರುತ್ತ ನೋಡ್ರಿ.

5:50 PM  

Post a Comment

Subscribe to Post Comments [Atom]

<< Home