Friday, December 08, 2006

ಮಲ್ಲಿಗೆಯ ಪರಿಮಳ ಹರಡಿದ ಸಂಗೀತ

ಅವಳು ಕೂತಿದ್ದು ಧೂಳು ತುಂಬಿದ,ಒಡೆದು ಹೋದ ಕಡಪ ಕಲ್ಲಿನ ನೆಲದ ಮೇಲೆ...
ಎದುರಿಗೆ ಕೂತಿದ್ದು ಒಬ್ಬೇ ಒಬ್ಬ ಶೋತೃ....
ತುಸು ಹೊರಗೆ ಈ ಪ್ರಪಂಚದ ಹಲವು ಗದ್ದಲಗಳು...
ಇದಾವುದರ ಪರಿವೆಯೇ ಇಲ್ಲದೆ ಅವಳು ಹಾಡುತ್ತಿದ್ದಳು...
ಸುಮಾರು ಮೂರು ಘಂಟೆ ಅವಳು ದಣಿವಿಲ್ಲದೇ ಹಾಡಿ ತಲೆ ಎತ್ತಿ ನಕ್ಕಳು...
ಹಳೇ ಕಾಲದ ಆ ಇಡೀ ಕೊಠಡಿ ಹಿಂದೂಸ್ತಾನಿ ಸಂಗೀತದ ಮಲ್ಲಿಗೆಯ ಪರಿಮಳದಿಂದ ತುಂಬಿ ಹೋಗಿತ್ತು...
ಇದು ಕೆಲವು ವರ್ಷಗಳ ಹಿಂದಿನ ಮಾತು...`ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ' ಎಂಬ ಕವಿವಾಣಿ ನೆನಪಿಸುವಂತೆ ಅವಳು ಹಾಡುತ್ತಲೇ ಪರಿಮಳ ಹರಡುತ್ತಲೇ ಹೋದಳು...ಮುಂದೆ ಒಂದು ದಿನ ಅವಳನ್ನು `ರಾಜ್ಯೋತ್ಸವ ಪ್ರಶಸ್ತಿ' ಹುಡುಕಿಕೊಂಡು ಬಂತು...

ಆ ಅನುಪಮ ಗಾಯಕಿ ಸಂಗೀತಾ ಕಟ್ಟಿ
ಅವಳು ಹಾಡಿದ್ದು ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದ ಬದಿಯಿರುವ ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್ ರೂಮಿನಲ್ಲಿ...
ಎದುರಿಗೆ ಕೂತಿದ್ದ ಒಬ್ಬೇ ಒಬ್ಬಳು ಶೋತೃ ಶಾಸ್ತ್ರೀಯ ಸಂಗೀತದ ಗಂಧ ಗಾಳಿ ತಿಳಿಯದ,ಆದರೆ ಒಳ್ಳೇ ಸಂಗೀತವನ್ನು ಆನಂದಿಸುವ ಕಿವಿ ಇದ್ದ ನಾನು...

ಅಭಿನಂದನೆಗಳು...ಸಂಗೀತಾ...

3 Comments:

Blogger Satish said...

ಸಂಗೀತಾ ಅವರನ್ನು ಬಹಳ ಹತ್ತಿರದಿಂದ ಬಲ್ಲ ನೀವೇ ಅದೃಷ್ಟವಂತರು!
'ಧೂಳು ತುಂಬಿದ ಕೊಠಡಿ...' ನೀವಾದರೂ ಧೂಳು ಒರೆಸಿಕೊಡಬಾರದಿತ್ತೇ :-)

3:34 AM  
Blogger mala rao said...

ಕಾಳೂ ಅವರೇ,
ಏನು ಬಹಳ ಅಪರೂಪ ವಾಗಿದ್ದೀರೀ?
ನಮ್ಮ ಹಾಸ್ಟೆಲ್ಲಿನ ಎಲ್ಲಾ ರೂಮುಗಳ ಗತಿಯೂ ಅಷ್ಟೆ ಆಗಿದ್ದರಿಂದ
ನಾವ್ಯಾರೂ ಧೂಳು ವರೆಸುವ ಸಾಹಸಕ್ಕೆ ಹೋಗುತ್ತಿರಲಿಲ್ಲ!
ನಮ್ಮೆಲ್ಲಾ ಇತರ ಸಡಗರದ ಮದ್ಯೆ ಓದುವುದಕ್ಕೇ ಪುರುಸೊತ್ತಿರಲಿಲ್ಲ ಇನ್ನು ಧೂಳು ವರೆಸುವುದು ಎಲ್ಲಿ ಬಂತೂ...

8:48 AM  
Anonymous Anonymous said...

ಕಾಳಣ್ಣ ಕೇಳಿದ ಪ್ರಶ್ನೆನೇ ನಾನೂ ಕೇಳಬೇಕೆಂದಿದ್ದೆ :)

ಸಂಗೀತಾ ಕಟ್ಟಿ, ಎರಡು ವರ್ಷಗಳ ಹಿಂದೆ ಶಿಕಾಗೊಗೆ ಬಂದಿದ್ದಾಗ,ನಾನೂ ಅವರ ಹಾಡುಗಳನ್ನು ಹತ್ತಿರದಿಂದ ಕೇಳಿದ್ದೆ. ಅವರೊಡನೆ ಕಳೆದ ದಿನಗಳ ಮತ್ತಷ್ಟು ನೆನಪುಗಳಿದ್ದರೆ ಹಂಚಿಕೊಳ್ಳಿ.

9:52 AM  

Post a Comment

Subscribe to Post Comments [Atom]

<< Home