Saturday, September 30, 2006

ಮರಳಿ ದೊರಕಿದ "ಭುವನದ ಭಾಗ್ಯ"



ಇಂಥದೊಂದು ಆನಂದವನ್ನು ಯಾವ ಪದಗಳಲ್ಲಿ ಹೇಳಿ ಕೊಳ್ಳುವುದೋ ಗೊತ್ತಾಗುತ್ತಿಲ್ಲ ಇವತ್ತಿಗೆ ಸರಿಯಾಗಿ "ಮೂವತ್ತು ದಿನ" ತುಂಬಿರುವ ಈ ಬ್ಲಾಗಿನಲ್ಲಿ ನಾನು ಮಾಡಿಕೊಂಡ ಮನವಿಗೆ ಓಗೊಟ್ಟ ಸಹೃದಯಿ ಒಬ್ಬರಿಂದ ನಾನು ವರುಷಗಳ ಹಿಂದೆ ಕಳೆದುಕೊಂಡ `ಸಿರಿ' ಯೊಂದು ಮರಳಿ ದೊರಕಿದೆ.

ಮೊನ್ನಿನ ಪೋಸ್ಟ್ ನಲ್ಲಿ ನಾನು ನನ್ನ ಶಾಲಾ ದಿನಗಳ ಪ್ರಾರ್ಥನಾ ಪದ್ಯ `ದೇವಿ ಭುವನ ಮನಮೋಹಿನಿ' ಯ ಬಗ್ಗೆ ಹೇಳಿದ್ದೆ.ಈ ಹಾಡು ನಿಮ್ಮ ಹತ್ರ ಇದ್ದರೆ ದಯವಿಟ್ಟು ನನಗೆ ಕಳಿಸಿ ಕೊಡುತ್ತೀರಾ ಅಂತ ಕೇಳಿದ್ದೆ

ಸ್ಯಾನ್ ಹೋಸೆಯ" ಶ್ರೀ ಮಧು ಕೃಷ್ಣಮೂರ್ತಿ" ಯವರು ತಮ್ಮ ಸಂಗ್ರಹದಲ್ಲಿದ್ದ "ದೇವಿ ಭುವನ ಮನ ಮೋಹಿನಿ" ಹಾಡನ್ನು ಕಳಿಸಿ ಕೊಟ್ಟಿದ್ದಾರೆ.ಮಧು ಅವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.

ಭಾರತ ಮಾತೆಯ ಸೌಂದರ್ಯವನ್ನು ಸಾರುವ ಈ ಸುಂದರ ಪದ್ಯದ ಪೂರ್ಣ ಪಾಠ ನಿಮಗಾಗಿ...

ದೇವಿ ಭುವನ ಮನ ಮೋಹಿನಿ

ನಿರ್ಮಲ ಸೂರ್ಯ ಕರೋಜ್ವಲ ಧರಣಿ

ಜನಕ ಜನನಿ ಜನನಿ

ನೀಲ ಸಿಂಧು ಜಲ ದೌತ ಚರಣಕಲ

ಅನಿಲವಿಕಂಪಿತ ಶಾಮಲಾಂಚಲ

ಅಂಬರ ಚುಂಬಿತ ಫಾಲ ಹಿಮಾಚಲ

ಶುಭ್ರ ತುಷಾರ ಕಿರೀಟಿಣಿ

ಪ್ರಥಮ ಪ್ರಭಾತ ಉದಿತವ ಗಗನೆ

ಪ್ರಥಮ ಸಾಮರಸ ತವ ತಪೋವನೆ

ಪ್ರಥಮ ಪ್ರಸಾದಿತ ತವ ವನ ಭವನೆ

ದಾನ ಧರ್ಮ ಹಿತ ಕಾರ್ಯಕಾರಿಣಿ

ಚಿರ ಕಲ್ಯಾಣ ಮಹೀತುವೆ ಧನ್ಯೆ

ದೇಶ ವಿದೇಶ ವಿಕಲಿತ ಅನ್ಯೆ

ಜಾಹ್ನವಿ ಜಮುನಾ ವಿಕಲಿತ ಕರುಣಾ

ಪುಣ್ಯ ಪೀಯೂಷಾ ಸ್ತನ್ಯವಾಹಿನೀ

ಈ ಭುವನದ ಭಾಗ್ಯವನ್ನು ಮತ್ತೆ ದೊರಕಿಸಿ ಕೊಟ್ಟ ಮಧು ಕೃಷ್ಣಮೂರ್ತಿಯವರಿಗೆ ಧನ್ಯವಾದಗಳು

Friday, September 29, 2006

ಹೇ ಹಂಸವಾಹಿನಿ ಜ್ಞಾನದಾಯಿನೀ...

ಇಂದು ಸರಸ್ವತಿ ಪೂಜೆ. ಜ್ಞಾನದ ಬೆಳಕು ಬೇಡಲು ಯಾರೂ ಮುಹೂರ್ತಕ್ಕಾಗಿ, ದಿನಕ್ಕಾಗಿ ಕಾಯಬೇಕಾಗಿಲ್ಲಾ ನಿಜ.ಆದರೆ ನಮ್ಮಲ್ಲಿನ `ತಿಳಿವು ಬೇಕು' ಎಂಬ ಹಂಬಲವನ್ನು, ಈ ದಿನನಿತ್ಯದ ಜಂಜಾಟದಲ್ಲಿ ಕಳೆದೇ ಹೋಗಿರುವ ಈ ಹಂಬಲವನ್ನು ಮತ್ತೆ ನೆನಪಿಸಿಕೊಳ್ಳಲು ಇದು ಸಕಾಲ.ಹಾಗೆ ನೆನಪಿಸಿಕೊಂಡು ವಾರದಲ್ಲಿ ತಿಂಗಳಲ್ಲಿ ಇಷ್ಟು ಕಾಲ `ನಾನು ತಿಳಿವಿನ ಮಹಾವೃಕ್ಷದ ಈ ಒಂದು ಕೊಂಬೆಯ ಹೂ ಹಣ್ಣುಗಳನ್ನು ಸವಿಯುವೆ' ಅಂತ ರೆಸೆಲ್ಯೂಶನ್ ಮಾಡಿಕೊಳ್ಳಲು ಸುದಿನ. ನೀವೇನೆನ್ನುತ್ತೀರಿ?

ವಿದ್ಯೆ,ಬುದ್ದಿ ಕೊಡು ಎಂದು ಸರಸ್ವತಿಯನ್ನು ಕೇಳಿಕೊಳ್ಳುವ ಹಲವಾರು ಹಾಡುಗಳೂ, ಶ್ಲೋಕಗಳೂ ಇವೆ `ಇವಳೇ ವೀಣಾಪಾಣಿ' ಯಂಥಾ ಭಕ್ತಿ ಗೀತೆಗಳೂ `ನಮಸ್ತೇ ಶಾರದಾದೇವಿ'ಯಂಥಾ ಶ್ಲೋಕಗಳೂ ಎಲ್ಲರಿಗೂ ಗೊತ್ತು. ನನ್ನ ಸ್ನೇಹಿತೆಯೊಬ್ಬಳು `ದಯಾಮಯಿ ಶಾರದಾ ಮಾಂ ಪಾಹೀ...' ಎಂಬ ಹಾಡು ತುಂಬಾ ಚೆನ್ನಾಗಿ ಹಾಡುತ್ತಿದ್ದಳು.`ಬೆಟ್ಟದಹೂ' ಸಿನಿಮಾದ `ತಾಯೆ ಶಾರದೆ' ಹಾಡಿನ ಈ ಸಾಲುಗಳು ನನಗೆ ತುಂಬಾ ಮನತಟ್ಟಿದ್ದು

ನಿನ್ನ ಮಡಿಲ ಮಕ್ಕಳಮ್ಮಾ
ನಿನ್ನ ನಂಬಿದ ಕಂದರಮ್ಮಾ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನೂ ಬೆಳಗಮ್ಮಾ
ನಮ್ಮ ಕೋರಿಕೆ ಆಲಿಸಮ್ಮಾ

ನಾವು ಶಾಲೆಯಲ್ಲಿ `ಹೇ ಹಂಸವಾಹಿನಿ ಜ್ಞಾನದಾಯಿನಿ ಅಮ್ಮಾ ಕರುಣೆ ತೋರು' ಎಂಬ ಸುಂದರ ಹಾಡೊಂದನ್ನು ಹಾಡುತ್ತಿದ್ದೆವು ಆದರೆ ನನಗೀಗ ನೆನಪಿರುವುದು ಈ ಒಂದೇ ಒಂದು ಸಾಲು ಅಷ್ಟೇ ಏನಿವಳು ದಿನವೂ ತಾನು ಮರೆತ ಹಾಡೊಂದನ್ನು ನಮಗೆ ನೆನಪಿಸುತ್ತಿದ್ದಾಳಲ್ಲಾ ಅಂತ ನಿಮಗೀಗ ಅನ್ನಿಸುತ್ತಿದೆ ಅಂತ ನನಗೆ ಗೊತ್ತು.ಶಾಲೆಯಲ್ಲಿ ನಾನು ಕಲಿತಿದ್ದೆಲ್ಲಾ ಮರೆತಿದ್ದೇನೆ ಎಂದು ನೀವು ತೀರ್ಮಾನ ಮಾಡುವ ಮೊದಲು ನಾನು ಶಾಲೆಯಲ್ಲಿ ಕಲಿತ ಇನ್ನೂ ನೆನಪಿಟ್ಟುಕೊಂಡು ಆಗಾಗ ಹೇಳಿಕೊಳ್ಳುವ ಅಪರೂಪದ ಸರಸ್ವತಿ ಶ್ಲೋಕವೊಂದನ್ನು ಇಲ್ಲಿ ನಿಮಗಾಗಿ ಕೊಟ್ಟಿದ್ದೇನೆ

ದೌರ್ಭಿರ್ಯುಕ್ತ ಚತುರ್ಭಿಹಿ ಸ್ಪಟಿಕ ಮಣಿಮಯೀ

ಮಕ್ಷಮಾಲಾಂ ದದಾನ ಹಸ್ತೇನೈಕೇನ ಪದ್ಮಂ

ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ

ಭಾಸಾ ಕುಂದೇಂದು ಶಂಖ ಸ್ಪಟಿಕ ಮಣಿನಿಭ

ಭಾಸಮಾನಾ ಸಮಾನ ಸಮೇ ವಾಗ್ದೇವತೇಯಂ

ನಿವಸತು ವದನೇ ಸರ್ವದಾ ಸುಪ್ರಸನ್ನಾ

ಅರ್ಥ-ತನ್ನ ನಾಲ್ಕು ಕೈಗಳಲ್ಲಿ ಕ್ರಮವಾಗಿ ಸ್ಪಟಿಕ ಮಣಿಯ ಅಕ್ಷಮಾಲೆ, ಅರಳಿದ ಕಮಲ (ಸಿತ ಪದ್ಮ), ಗಿಣಿ, ಪುಸ್ತಕವನ್ನು ಹಿಡಿದಿರುವ, ಮಲ್ಲಿಗೆ ಅರಳು (ಕುಂದ), ಚಂದ್ರ (ಇಂದು), ಶಂಖ, ಸ್ಪಟಿಕಮಣಿಗಳ ಸಮಾನವಾಗಿ ಹೊಳೆಯುವ (ಭಾಸ ಎಂದರೆ ಹೊಳೆಯುವುದು ಎಂದು ಅರ್ಥ) ಮುಖವುಳ್ಳ ವಾಗ್ದೇವತೆಯು ಸದಾಕಾಲವೂ ಸುಪ್ರಸನ್ನಳಾಗಿ ನನ್ನ ನಾಲಗೆಯ ಮೇಲೆ ನೆಲೆಸಿರಲಿ.

Thursday, September 28, 2006

ದೇವಿ ಭುವನ ಮನಮೋಹಿನಿ


ನನಗೆ ಹೂಗಳೆಂದರೆ ಬಹಳ ಇಷ್ಟ.ಹಾಗಾಗಿ ನನ್ನ ಅಂಗಳದ ತುಂಬಾ ಹೂ ಗಿಡಗಳು ಮತ್ತು ಕ್ಯಾಮರಾ ತುಂಬಾ ಹೂವಿನ ಫೋಟೊಗಳು! ಹೂಗಳು ದಿನವನ್ನೂ,ಮನವನ್ನೂ ಬೆಳಗಿಸುತ್ತವೆ ಅಂತ ನನಗನ್ನಿಸುತ್ತೆ
ಬೇರಾವುದೇ ಬಣ್ಣದ ಹೂವಿನ ಅಂದವೂ, ಸುವಾಸನೆಯೂ ಮನವ ತುಂಬುವ ರೀತಿಯೇ ಬೇರೆ.ಕೇಸರಿ ಬಣ್ಣದ ಹೂ ನನ್ನ ಮನಸ್ಸಿನಲ್ಲಿ ತುಂಬುವ ಭಾವವೇ ಬೇರೆ.ಯಾವುದೇ ಕೇಸರಿ ಬಣ್ಣದ ಹೂ ನೋಡಿದರೂ ನನಗೆ ನಮ್ಮ ರಾಷ್ಟ್ರಧ್ವಜವೇ ನೆನಪಾಗುತ್ತದೆ.ತ್ರಿವರ್ಣ ಮನದ ಅಂಗಳದ ಎತ್ತರದಲ್ಲಿ ಪಟಪಟಿಸುತ್ತದೆಅದೇ ಬಿಳಿ ಮೋಡಗಳನ್ನೋ,ಹಸಿರು ಪ್ರಕೃತಿಯನ್ನೋ ನೋಡಿದಾಗ ಬಾವುಟ ನೆನಪಾಗುತ್ತಾ?ಉಹುಂ...

ಧ್ವಜದೊಂದಿಗೆ ನೆನಪಾಗುವುದು ಚಿಕ್ಕಂದಿನಲ್ಲಿ ಹಾಡುತ್ತಿದ್ದ ದೇಶಭಕ್ತಿಗೀತೆಗಳು ಎಷ್ಟೊಂದು ದೇಶಪ್ರೇಮದ ಹಾಡು ಹಾಡುತ್ತಿದ್ದೆವು ಆಗ...ಬಾಲ್ಯದ ಮುಗ್ಧ ಮನಸ್ಸಿಗೆ ಈ ಹಾಡುಗಳನ್ನು ಹಾಡುತ್ತಾ ಎಂಥಾ ಹೆಮ್ಮೆ ಇತ್ತು ದೇಶದ ಬಗ್ಗೆ...
ಅಂಥದ್ದೊಂದು ಗೀತೆ "ದೇವಿ ಭುವನ ಮನ ಮೋಹಿನಿ"

ನಾನು ಹೈಸ್ಕೂಲ್ ನಲ್ಲಿ ಎರಡು ತಿಂಗಳು ಹಾಡಿದ ಪ್ರಾರ್ಥನಾ ಪದ್ಯ.ಅಷ್ಟರಲ್ಲಿ ತಂದೆಯವರಿಗೆ ಬೇರೆ ಊರಿಗೆ ವರ್ಗವಾಗಿದ್ದರಿಂದ ನಾನು ಹೊಸ ಶಾಲೆಯಲ್ಲಿ ಹೊಸಪ್ರಾರ್ಥನಾ ಪದ್ಯ ಕಲಿಯಬೇಕಾಯಿತು.ಹೀಗೆ`ಭುವನ ಮನ ಮೋಹಿನಿ' ಮರೆತು ಹೋದಳು

ಈಗ ಕೆಲವು ದಿನಗಳಿಂದ ಕೇಸರಿ ಹೂಗಳನ್ನು ನೋಡಿದಾಗಲೆಲ್ಲಾ "ದೇವಿ ಭುವನ ಮನ ಮೋಹಿನಿ"ಯದೇ ನೆನಪಾಗುತ್ತಿದೆ.ಎಷ್ಟೆಷ್ಟು ಪ್ರಯತ್ನಿಸಿದರೂ ಹಾಡಿನ ಕೆಲವು ವಾಕ್ಯಗಳು,ಪದಗಳು ನೆನಪಾಗುತ್ತವೇ ಹೊರತು ಪೂರ್ತಿ ಪದ್ಯ ನೆನಪಾಗುತ್ತಿಲ್ಲ.

ನಿಮ್ಮಲ್ಲಿ ಯಾರಿಗಾದರೂ ಈ ದೇಶಭಕ್ತಿ ಗೀತೆ ಬರುತ್ತಾ?ನಿಮಗೆ ಬಂದರೆ ನನಗೆ ದಯವಿಟ್ತು ಕಳಿಸುತ್ತೀರಾ?
ಕಳೆದು ಹೋಗಿರುವ ನನ್ನ ಈ ಹಾಡನ್ನು ಹುಡುಕಿ ಕೊಡುವಿರಾ?

Wednesday, September 27, 2006

ತಟ್ಟೇ ಕೂಗಾಡಲೀ.....



"ತಟ್ಟೇ ಕೂಗಾಡಲೀ..." ಇದ್ದಕ್ಕಿದ್ದಂತೆ ಅಡುಗೆಮನೆ ಕಡೆಯಿಂದ ಕೇಳಿ ಬಂದಾಗ ಬೆಚ್ಚಿ ಬಿದ್ದೆ ತಟ್ಟೆ ಕೂಗಾಡುವುದೆಂದರೇನೂ? ತಟ್ಟೆಗಳಿಗೆ ಹೀಗೆಲ್ಲಾ "ಕೂಗಾಡಲು" ಕರೆ ಕೊಡುತ್ತಿರುವ ಮಹಾನ್ ಲೀಡರ್ ಯಾರಪ್ಪಾ...ತಟ್ಟೇಗಳೂ ಏನಾದರೂ ಯೂನಿಯನ್ ಗೀನಿಯನ್ ಅಂತ ಮಾಡಿಕೊಂಡು ಬಿಟ್ಟವಾ...ಅಂತಾ ಗಾಭರಿಯಿಂದ ಅಡುಗೆ ಮನೆ ಇಣುಕಿದೆ.ಅಷ್ಟೊತ್ತಿಗೆ ಅರವಿಂದನಿಗೆ ಊಟದ ತಟ್ಟೆ ಕೈಗೆ ಸಿಕ್ಕಿದ್ದರಿಂದ ಹಾಡು ನಿಲ್ಲಿಸಿದ. "ಅಬ್ಬೋ..." ಇಷ್ಟೇನಾ ಅಂತ ಉಸಿರುಬಿಟ್ಟೆ.ಒಂದು ನಿಮಿಷದ ನಂತರಯೋಚನೆಯಾಯಿತು."ಅಲ್ಲಾ...ಮನೆಯಲ್ಲಿರುವ ಎಂಟು ದೊಡ್ಡ ತಟ್ಟೆಗಳೂ,ಅದೇ ಸೆಟ್ ನಲ್ಲಿ ಬಂದ ಇನ್ನೆಂಟು ಸಣ್ಣತಟ್ಟೆಗಳೂ ಕೂಗಾಡಲು ಶುರು ಮಾಡಿದರೆ ಗತಿ ಏನು? ಜೊತೆಗೆ ಇದು ಸಲಾಡ್ ಇಡಲು ಚೆನ್ನಾಗಿದೆ,ಇದು ಯಾರಾದ್ರೂ ಗೆಸ್ಟ್ ಬಂದಾಗ ಸ್ವೀಟ್ಸ್ ಅರೇಂಜ್ ಮಾಡಿ ಡೈನಿಂಗ್ ಟೇಬಲ್ ಮೇಲಿಡಲು ಚೆನ್ನಾಗಿದೆ,ಇದು ಸ್ಟಾರ್ ಶೇಪ್ ನಲ್ಲಿದೆ,ಇದು ಲೀಫ್ ಶೇಪ್ನಲ್ಲಿದೆ, ಈ ತರದ್ದು ಇಂಡಿಯಾನಲ್ಲಿ ಸಿಗೋಲ್ಲಾ...ಅಂತೆಲ್ಲಾ ಮಣ್ಣು ಮಸಿ ಕಾರಣ ಕೊಟ್ಟು ನಾನು ಕೊಂಡಿರುವ ತಟ್ಟೆಗಳೂ ಸುಮಾರಿವೆ ಅವೂ ಜೊತೆಗೂಡಿದರೇ? ಎಷ್ಟೆಲ್ಲಾ ಗದ್ದಲವಾಗಬಹುದೂ...?ನಮ್ಮಮ್ಮ ಕೊಟ್ಟ ತಟ್ಟೆ,ದೇವರಿಗೆಂದು ತಂದ ಬೆಳ್ಳಿತಟ್ಟೆ ಮುಂತಾಗಿ ಇಂಡಿಯಾದಿಂದ ನಮ್ಮೊಂದಿಗೆ ವಲಸೆ ಬಂದವುಗಳು ತಮ್ಮ ಅಮೆರಿಕನ್ ಅಣ್ಣಂದಿರ ಪಾರ್ಟಿ ಸೇರದೆ ಸುಮ್ಮನುಳಿಯುತ್ತವೆ ಅಂತ ಏನು ಗ್ಯಾರೆಂಟಿ? ನನಗೆ ತುಂಬಾ ಯೋಚನೆಯಾಗಿ ಬಿಟ್ಟಿತು
ನಾನು ತಲೆ ಕೆಡಿಸಿ ಕೊಳ್ಳುತ್ತಾ ಹಾಲ್ ಗೆ ಬಂದರೆ ಅರವಿಂದ ಚಪಾತಿಯಿಂದ ಚಮಚ ಮಾಡಿಕೊಂಡು ಕಾಳಿನ ಉಸ್ಲಿಯನ್ನು ಮೆಲ್ಲುತ್ತಾ `ಚಾಂದ್ ಚುಪಾ ಬಾದಲ್ ಮೇ..'ಅಂತ ತನ್ನಷ್ಟಕ್ಕೆ ತಾನು ಸರಸವಾಗಿ ಹಾಡಿಕೊಳ್ಳುತ್ತಿದ್ದ.ನನಗೆ ಸಿಟ್ಟು ನೆತ್ತಿಗೇರಿತು "ತಟ್ಟೆಗಳೇ ಕೂಗಾಡಿ'ಅಂತೆಲ್ಲಾ ಅವಕ್ಕೆ ಅಲ್ಲಿ ಕರೆ ಕೊಟ್ಟು ಬಿಟ್ಟು ಇಲ್ಲಿ ಬಂದು ತಾನು ಹಾಯಾಗಿ ಚಾಂದ್ಉ..,ಬಾದಲ್ಲುಉ... ಅಂತ ಹಾಡಿ ಕೊಳ್ತಾ ಇದಾನಲ್ಲಾ ಥೇಟ್ ಈಗಿನ ನಮ್ಮ ನಾಯಕರುಗಳ ತರಾ...ಅಂತಾ.
ತಟ್ಟೆ ಯಾಕೆ ಕೂಗಾಡಬೇಕೂ "ಹೊಟ್ಟೆ ಕೂಗಾಡುವುದು ಸಾಲದೇ?" ಅಂತ ಕೋಪದಿಂದ ಕೂಗಿದೆಅವನು ಕಿವಿಗೇ ಹಾಕಿಕೊಳ್ಳಲಿಲ್ಲಾ...ತನ್ನ ಪಾಡಿಗೆ ತಾನು ಚಾಂದ್ ಬಾದಲ್ ಗಳ ಮಧ್ಯೆ ಕಳೆದು ಹೋಗಿದ್ದ.
ಸರಿ ನಾನೇ ಈ ಕ್ರೈಸಿಸ್ ಮ್ಯಾನೇಜ್ ಮಾಡೋಣವೆಂದು ನಿರ್ಧರಿಸಿ ಗಹನವಾಗಿ ಯೋಚಿಸತೊಡಗಿದೆ ನನ್ ತಲೆ ಅಂದ್ರೆ ಅಷ್ಟೇನು ಕಳಪೆ ಅಲ್ಲಾ ಅಂತ ಮನದಟ್ಟಾಗಿದ್ದು ಐಡಿಯಾ!ಅಂತ(ಯುರೇಕಾ ಅಂತಲ್ಲಾ!) ಒಂದು ಐಡಿಯಾ ಹೊಳೆದಾಗ! ನಮ್ಮ "ಡಿಶ್ಶಮ್ಮ"ನಿಗೆ ಕೂಗಾಡುವ ತಟ್ಟೆಗಳಿಗೆಲ್ಲಾ ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು...ತಗೋ ತಿನ್ನು! ಅಂತ "ನಾಲ್ಕು ನಾಲ್ಕು ಸರಿಯಾಗಿ ಇಕ್ಕು" ಅಂತ ಸುಪಾರಿ ಕೊಟ್ಟು ಬಿಡುವುದು!ವಾವ್ ಗ್ರೇಟ್ ಐಡಿಯಾ ಅನ್ನಿಸಿತು.
ಸರಿ ಡಿಶ್ಷಮ್ಮನೊಂದಿಗೆ ಡೀಲ್ ಕುದುರಿಸಿ ಉಶ್ಶಮ್ಮಾ...ಅಂತ ಟಿ.ವಿ.ನೋಡುತ್ತಾ ಸೋಫಾಕ್ಕೊರಗಿದೆ.ಅರವಿಂದ ಉಸ್ಲಿ,ಚಪಾತಿ ತಿಂದು ಮುಗಿಸಿ ಅಡುಗೆ ಮನೆ ಕಡೆ ಹೋದ.ಕೆಲ ಕ್ಷಣಗಳಲ್ಲೇ "ಲೋಟಾ ಹೋರಾಡಲೀ..." ಎಂಬ ರಾಗ ಕೇಳಿ ಬಂತು...ನಾನು ಜಾಣ ಕಿವುಡಿಯಾಗಿ ನಿರಾತಂಕವಾಗಿ ಟಿ.ವಿ ನೋಡುವುದನ್ನು ಮುಂದುವರೆಸಿದೆ...
ಟಿಪ್ಪಣಿ-
1)ಇವತ್ತು sanfrancisco ಪ್ರದೇಶ ದಲ್ಲಿರುವ stanford KZSU 90.1 ರೇಡಿಯೋ ಚಾನಲ್ ನಲ್ಲಿ ರಾಜ್ ಕುಮಾರ್ ಅವರ ಹಾಡುಗಳಿಂದ ಕೂಡಿದ "ರಾಜ್ ಸ್ಮರಣೆ" ಕಾರ್ಯಕ್ರಮವಿದೆ ಅದು ಯಶಸ್ವಿ ಯಾಗಲೀ ಅಂತ ಹಾರೈಸುತ್ತಾ ಇವತ್ತಿನ ಪೋಸ್ಟ್ ಅನ್ನು ನಾನು ಚಿಕ್ಕಂದಿನಲ್ಲಿ ನೋಡಿ ನಲಿದ ರಾಜ್ ಚಿತ್ರಗಳ ನೆನಪಿಗೆ,ಅಂಥಾದ್ದೊಂದು ಸವಿ ನೆನಪು ಬಿಟ್ಟು ಹೋದ "ರಾಜ್ ಗೆ" ಅರ್ಪಿಸುತ್ತಿದ್ದೇನೆ.
2)ಡಿಶ್ಶಮ್ಮ ಎಂದರೆ ಡಿಶ್ ವಾಶರ್ ಮಿಶಿನ್ನು.ಇಲ್ಲಿನ ಪಾತ್ರೆ ತೊಳೆಯುವಾಕೆ! ಲಕ್ಷಮ್ಮ,ಸಾಕಮ್ಮ ಥರ ನಾವುನಮ್ಮನೇಲಿ ಇವಳನ್ನು "ಗೌರವದಿಂದ" ಡಿಶ್ಶಮ್ಮಾ ಅಂತ ಕರೀತೀವಿ.

Tuesday, September 26, 2006

ಗೋಲ್ಡನ್ ಗೇಟ್ ಬ್ರಿಡ್ಜ್ ಎಂಬ "ಸುವರ್ಣ ಸುಂದರಿ"



ಗೋಲ್ಡನ್ ಗೇಟ್ ಬ್ರಿಡ್ಜ್ ಅಂದಾಕ್ಷಣ ಚಿನ್ನದ ಬಣ್ಣದ ಸೇತುವೆ ಕಣ್ಣ ಮುಂದೆ ಬರುತ್ತಿದೆಯೇ? ಹೆಸರಲ್ಲಿ ಗೋಲ್ಡ್ ಇದ್ದರೂ ಇದು ಹವಳದ ಕೆಂಪಿನ ಬಣ್ಣದ್ದು! ಗೋಲ್ಡನ್ ಸ್ಟೇಟ್ ಎಂದೇ ಮುದ್ದಾಗಿ ಕರೆಸಿ ಕೊಳ್ಳುವ ಕ್ಯಾಲಿಫೋರ್ನಿಯದಲ್ಲಿರುವುದರಿಂದ ಸುವರ್ಣ ಸೇತುವೆ ಎಂದೋ, ಕ್ಯಾಲಿಫೋರ್ನಿಯದ `ಗೋಲ್ಡ್ ರಶ್' ನೆನಪಿಸಿಕೊಡು `ಓ ಅದಕ್ಕೇ ಇದು ಗೋಲ್ಡನ್ ಗೇಟ್' ಅಂದು ಕೊಂಡಿರೋ ಕೆಟ್ಟಿರಿ! ಕ್ವಿಝ್ ನಲ್ಲಿ ಬಝರ್, ಕ್ವೀ ...ನಿಮ್ಮ ಉತ್ತರ ತಪ್ಪು ಅಂದು ಬಿಡತ್ತೆ!

ಕ್ಯಾಲಿಫೋರ್ನಿಯದಲ್ಲಿ ಚಿನ್ನದ ರಶ್ಶು ಶುರುವಾಗುವ ಮೊದಲೇ ಅಂದರೆ 1846 ರಲ್ಲೇ ಯು.ಎಸ್.ಆರ್ಮಿಯ ಲೆಫ್ಟನೆಂಟ್ ಜಾನ್.ಸಿ.ಫ್ರಿಮಾಂಟ್ ಈಗ ಬ್ರಿಡ್ಜ್ ಇರುವ ಜಾಗಕ್ಕೆ ಗೋಲ್ಡನ್ ಗೇಟ್ ಅಂತ ಕರೆದಿದ್ದ. ಬ್ರಿಡ್ಜ್ ಕಟ್ಟಿದ್ದು 1937ರಲ್ಲಿ! ಫೆಸಿಫಿಕ್ ಸಾಗರದಿಂದ sanfrancisco bay ಗೆ ದ್ವಾರದಂತಿದ್ದ ಈ ಇರುಕಲಾದ strait ಅನ್ನು ನೋಡಿ ಲೆಫ್ಟನೆಂಟ್ ಫ್ರಿಮಾಂಟ್ ಗೆ ವ್ಯಾಪಾರ ವಾಣಿಜ್ಯ ನಡೆಸಲು ಆಯಕಟ್ಟಿನಲ್ಲಿದ್ದ ಇದು ಚಿನ್ನದ ದ್ವಾರ ಅನ್ನಿಸಿತು ಜೊತೆಗೆ ಅವನಿಗೆ ಇಲ್ಲಿನ ಹಾರ್ಬರ್ ನೋಡಿ ಇಸ್ತಾಂಬುಲ್ ನ `ಗೋಲ್ಡನ್ ಹಾರ್ನ್' ಹಾರ್ಬರ್ ನೆನಪಿಗೆ ಬಂತು ಬೈಝಾಂತಿಯನ್ ಹೆಸರಾದ `ಗೋಲ್ಡನ್ ಹಾರ್ನ್' ಅನ್ನು ನೆನಪಿಸಿದ ಜಾಗಕ್ಕೆ ಫ್ರಿಮಾಂಟ್ `ಗೋಲ್ಡನ್ ಗೇಟ್' ಎಂದೇ ಕರೆದ.ಹೀಗೆ ಇದು `ಗೋಲ್ಡನ್ ಗೇಟ್' ಅಂತ ಹೆಸರು ಪಡೆದಿದ್ದು

1937 ರ ಮೇ 27ರಂದು ಸಾರ್ವಜನಿಕರಿಗೆ ಸಂಚಾರ ಮುಕ್ತವಾದ ಈ ಸೇತುವೆ sanfrancisco ಸಿಟಿಯ ಉತ್ತರ ತುದಿಯನ್ನೂ ಮರೀನ್ ಕೌಂಟಿಯ ಪುಟ್ಟ ಊರು ಸಾಸಲಿಟೊ ದೊಂದಿಗೆ ಸೇರಿಸುತ್ತದೆ.1964ರ ತನಕ ಇದು ಪ್ರಪಂಚದ ಅತಿ ಉದ್ದದ suspension bridge ಆಗಿತ್ತು.ಇದರ longest span 4,200 ಅಡಿಗಳು.ಒಟ್ಟು ಉದ್ದ 1.7 ಮೈಲಿಗಳು.ಅಗಲ 90ಅಡಿಗಳು

ಈ ಚಿನ್ನದ ರಾಣಿ ಸ್ವಲ್ಪ ಚಂಚಲ ಚಿತ್ತೆ ನಮ್ಮೂರಿಗೆ ಬಂದವರ ಹತ್ರ " ಎಷ್ಟು ಚೆನ್ನಾಗಿದಾಳೆ ಗೊತ್ತಾ...ಬನ್ನಿ ತೋರಿಸುತ್ತೇವೆ" ಅಂತ ಜಂಭ ಹೊಡೆದು ಕರೆದುಕೊಂಡು ಹೋದರೆ fog ನ ಪರದೆಯಲ್ಲಿ ಮುಖ ಮುಚ್ಚಿಕೊಂಡು ಬಿಟ್ಟಿರುತ್ತಾಳೆ! ಏನೋ ನಿಮ್ಮಗಳ ಪುಣ್ಯ ನಿಮಗೆ ತೋರಿಸಲೆಂದು ಫೋಟೋ ತೆಗೆಯುವೆನೆಂದಾಗ ನನಗೆ ಅವಳು ಪೋಸ್ ಕೊಟ್ಟಳು!

Monday, September 25, 2006

ಬನದಲಿ ದಿನದಿನ...


ಬನದಲಿ ದಿನ ದಿನ ಬಣ್ಣದ ಹೂಗಳು
ನಿನ್ನಯ ಚೆಲುವನು ಸಾರುತಿವೇ...
ಕೋಗಿಲೆ ಗಿಳಿಗಳು ನಿನ್ನಿನಿಗೊರಳಿನ
ಇಂಪಿನ ದನಿಯನು ಬೀರುತಿವೇ...
ಇಂಪಿನ ದನಿಯನು ಬೀರುತಿವೇ...

ಬೀಸುವ ತಣ್ಣನೆ ತಂಪಿನ ಗಾಳಿ
ನಿನ್ನುಸಿರೊಲವನು ತೋರುತಿದೇ..
ನಳನಳಿಸಿರುವ ಬಿರಿ ಹೂಗಳಿವು
ನಿನ್ನೊಡಲಂದವ ಮೆರೆಯುವುದೇ...
ನಿನ್ನೊಡಲಂದವ ಮೆರೆಯುವುದೇ...

ಬನದೊಳು ನೀನು ನಿನ್ನೊಳು ನಾನು
ನಾನೂ ನೀನೂ ಬನದೊಳಗೂ...
ಬನದೊಳು ನೀನು ಕನವರಿಪಾನು
ಎಲ್ಲವು ಎನ್ನಯ ಮನದೊಳಗೂ...
ಎಲ್ಲವು ಎನ್ನಯ ಮನದೊಳಗೂ...

Sunday, September 24, 2006

ಸುಂದರ ಸೂರ್ಯಾಸ್ತದ "ಇನ್ನೊಂದು ಮುಖ"

ನಮಗಿದ್ದುದು ಮಳೆ ನೀರನ್ನು ನಂಬಿರುವ ಬೆಟ್ಟು ಗದ್ದೆಗಳು. ಬೇಸಾಯ ಮಾಡುವುದು ಎಷ್ಟು ತ್ರಾಸದ ಕಾಯಕ ಎಂದು ಬೇಸಾಯ ಮಾಡಿದವರಿಗೆ,ಅದನ್ನು ಪ್ರತಿ ಹಂತದಲ್ಲೂ ಕಣ್ಣಾರೆ ಕಂಡವರಿಗೆ ಮಾತ್ರ ಗೊತ್ತು.ಅದು ಓದಿ ಕೇಳಿ ತಿಳಿಯುವಂಥದಲ್ಲ. ಅಂಥ ಬೆಳೆ ಸಮೃದ್ದವಾಗಿ ಬೆಳೆದು,ತೆನೆ ಬರುವ ಹೊತ್ತಿನಲ್ಲಿ ಮಳೆ ಮಾಯ! ಗದ್ದೆಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಕೆಳ ಹೋಗುವುದನ್ನೂ ದಿನಾ ಹೋಗಿ ನೋಡುವಾಗ ಹೃದಯವೇ ಕುಸಿದಂಥಾಗುತ್ತದೆ.ತಂದೆ ಎಲ್ಲೋ ದೂರದ ಊರಿನಲ್ಲಿ.ದಿನಾ ಸಂಜೆ ಈ ದಿನವಾದರೂ ಮಳೆ ಬರುವುದೇನೋ ಎಂಬ ಆಸೆಯಿಂದ ಪಶ್ಚಿಮ ಆಕಾಶವನ್ನು ದಿಟ್ಟಿಸುವ ತಾಯಿ.ಪಶ್ಚಿಮ ದಿಗಂತದಲ್ಲಿ ಕ್ಷಣ ಕ್ಷಣಕ್ಕೂ ಹಳದಿ,ಕೆಂಪು ಬಣ್ಣದಿಂದ ಮನೋಹರವಾಗುವ ಮೋಡವನ್ನು ನೋಡುತ್ತಾ ತಾಯಿಯ ಎದೆಯಲ್ಲಿ ಹೆಚ್ಚುವ ದುಗುಡ ದಿನಗಳೆದಂತೆ ಗದ್ದೆಯ ನೀರು ಆರಿ,ಕೆಸರು ಆರಿ,ಗದ್ದೆಯ ಮಣ್ಣು ಒಣಗಿ ಸೀಳು ಸೀಳಾಗಿ ಭತ್ತದಗಿಡಗಳು ಒಣಗತೊಡಗಿದಾಗ ತಾಯಿಯ ಕಣ್ಣಂಚಿನಲ್ಲಿ ಕಾಣಿಸುವ ಕಣ್ಣೀರು... ದುಃಖ ಅದನ್ನು ಕಂಡು ನನ್ನ ಕಣ್ಣೀನಲ್ಲಿಯೂ ಕಣ್ಣೀರು.ದಿನದಿನಗಳ ಕಾಲ ದಿನವೂ ಸಂಜೆ ದಿಗಂತದಲ್ಲಿ ಕಪ್ಪು ಮೋಡಗಳು ಕಾಣಿಸದೆ,ಬೆಂಕಿಯಂಥ ಕೆಂಪು ಬಣ್ಣದರಾಶಿ ಕಾಣಿಸುವಾಗ ತಾಯಿಯ ಕರುಳಿನಲ್ಲಿ ಆಗುವ ಸಂಕಟ.ಇಂಥ ದಿನಗಳಲ್ಲಿ ಒಮ್ಮೊಮ್ಮೆ ತಂದೆ ಮನೆಯಲ್ಲಿರುವುದಿತ್ತು.ಆದರೆ ಆ ಸಂತಸವನ್ನು ಕೆಂಪು ಮೋಡ ಕಿತ್ತುಕೊಳ್ಳುತ್ತಿತ್ತು ಕವಿಗೆ,ಪ್ರವಾಸಿಗನಿಗೆ ಅದ್ಬುತ,ರಮ್ಯ,ಅಲೌಕಿಕ ಎಂದೆನಿಸುವ ಸೂರ್ಯಾಸ್ತಮಾನದ ದೃಶ್ಯವು ಕೂಡಾ ಇದೇ...ಉರಿಯುತ್ತಿರುವ ಬೆಳೆಯನ್ನು ನೋಡಿ ಸಹಿಸಲಾರದೆ ಕೈ ಚೆಲ್ಲಿ ಕೂತ ಅಪ್ಪ .ಅಮ್ಮನ ಮ್ಲಾನ ಮುಖಗಳ ನೆನಪು ಭತ್ತದ ಪೈರೆಲ್ಲಾ ಒಣಗಿದರೆ ಮುಂದೆ ಕಾದಿರುವ ಉಪವಾಸದ ದಿನಗಳ ನೆನಪು.ತೀರಾ ಅಸಹಾಯಕಳಾಗಿ `ದೇವರಿಲ್ಲಾ' ಎಂದು ತಾಯಿ ಕಣ್ಣೀರು ಮಿಡಿಯುತ್ತಿದ್ದ ನೆನಪು ದುಃಖವೆಂದರೇನೆಂದು ಸ್ಪಷ್ಟವಾಗುವ ಮೊದಲೇ ದುಃಖವನ್ನು ನಾನು ಕಂಡಿದ್ದು ಹೀಗೆ.

ಕನ್ನಡದ ಪ್ರಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿಯವರು ತಮ್ಮ `ತೀರ' ಪುಸ್ತಕದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಳ್ಳುವುದು ಹೀಗೆ.ಈ ಪುಸ್ತಕ ಓದಿದ ಮೇಲೆ ನಾನು ನೋಡುವ ಪ್ರತಿ ಮನೋಹರ ಸೂರ್ಯಾಸ್ತ ದಲ್ಲೂ ಗಟ್ಟಿಯವರ ತಾಯಿ ನೆನಪಾಗುತ್ತಾರೆ....ಕಣ್ಣುಗಳು ತುಂಬಿ ಬರುತ್ತವೆ...ಕವಿಗಳೂ,ರಸಿಕರೂ ಸವಿದು,ಹಾಡಿ ಹೊಗಳುವ ಸಂಜೆಯ ಬಂಗಾರ ಕೆಂಪಿನ ಸೂರ್ಯ, ಪುಟ್ಟ ಹುಡುಗನೊಬ್ಬನ ಕಣ್ಣಿನ ಕನಸುಗಳನ್ನೂ, ತಟ್ಟೆಯ ಅನ್ನವನ್ನೂ ಕಸಿದುಕೊಳ್ಳುತ್ತಾನಾ...ಎಂದು ಮತ್ತೆ ಮತ್ತೆ ಯೋಚಿಸುವಂತಾಗುತ್ತದೆ...

Saturday, September 23, 2006

ಮುದ್ದು ಮರಿ



ಅದ್ಯಾಕೋ ನಮ್ಮ ಜನ ಬೆಕ್ಕಿಗೆ `ಚಾಲಾಕಿ'ಅಂತ ಹೆಸರಿಟ್ಟು ವಂಚಕ/ಕಿ ಅಂತ ಸುಮ್ ಸುಮ್ನೆ ಬ್ರ್ಯಾಂಡ್ ಮಾಡಿಬಿಟ್ಟಿದ್ದಾರೆ ನಾಯಿ ಜೊತೆಗೆ ಕಂಪೇರ್ ಮಾಡುವುದು ಬೇರೆ...ಕಂಪೇರಿಂಗ್ ಆಪಲ್ಸ್ ವಿತ್ ಆರೆಂಜ್ಸ್!
ನಮ್ಮಲ್ಲಿ ಬೆಕ್ಕೇ..ಸೊಕ್ಕೇ..ಎನ್ನುವ ಹಾಡು ಚಿಲಿಪಿಲಿ ಇಲಿ ನೋಡಿದ ಬೆಕ್ಕುಬಿಟ್ಟರೆ ಬೇರಾವ ಕವನವೂ ಬಂದಂತೆ ಕಾಣೆ

ಅದಕ್ಕೇ ನಾನು ಈ ಹಾಡು ಹಾಡಲು`ಅಂಗ್ರೇಜಿ ಕಿಟನ್' ಒಂದನ್ನು ದುರ್ಗಕ್ಕೆ ಕರೆತರಬೇಕಾಯಿತು!ಕವನ ಇಂಗ್ಲೀಷಿನದಾದರೂ ಚಿತ್ರ ಮಾತ್ರ ಅಪ್ಪಟ ನಮ್ಮ ನೆಲದ ಪುಟಾಣಿಯದ್ದು ಚಪ್ಪಲಿ ಬಿಟ್ಟ ಬಾಗಿಲ ರಂಗೋಲಿಯ ಮೇಲೆ ಕೂತ (ಸ್ನೇಹಿತರೊಬ್ಬರ) ಮುದ್ದು ಮರಿಯದ್ದು ಈ ಮುದ್ದುಮರಿ ಏನು ಹೇಳ್ತಾ ಇದೇ?

I'm only a kitten,

and I stay in my place...

Up there on your chair,

on your bed or your face!

I'm only a kitten,

and I don't finick much...

I'm happy with cream

and anchovies and such!

I'm only a kitten,

and we'll get along fine...

As long as you know

I'm not yours... you're all mine!

ಬೆಕ್ಕು ತನ್ನನ್ನು ಸಾಕಿದವರಿಗೆ ತೋರುವ ಪ್ರೀತಿ ಆ ಪ್ರೀತಿಯ ಮಹಾಪೂರದಲ್ಲಿ

ಮಿಂದವರಿಗಷ್ಟೇ ಗೊತ್ತಿರುವ ಸತ್ಯ `ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು!

Friday, September 22, 2006

ನಗೆಯ ಹಾಯಿದೋಣಿ



ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ

ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ಏಣಿ

ಆಸೆಯೆಂಬ ತಳ ಒಡೆದ ದೋಣಿಯಲ್ಲಿ ದೂರತೀರಯಾನ

ಯಾವ ಲೀಲೆಯೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ

ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರರಿಲ್ಲಾ

ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲಾ

Thursday, September 21, 2006

ಹಸಿರು ಚಾಮರಗಳು



ಅಂದು ಅಲ್ಲಿ ಸುಮ್ಮನೆ ಅಲೆಯುತ್ತಿದ್ದೆ.....

ಹಸಿರು, ಚಾಮರ ಬೀಸುತ್ತಿತ್ತು.

ಹಸಿರು, ಚಾಮರ ಬೀಸುತ್ತಾ ನನ್ನ ಕರೆಯಿತು

ನೀಲಿಯ ಮುಗಿಲಿನ ಚಪ್ಪರದಡಿಯಲ್ಲಿ,

ಸಾವಿರ ನಕ್ಷತ್ರದಂಥಾ ಬಿಳಿ ಬಿಳಿ ಹೂ ಹಾಸಿರುವಲ್ಲಿ,

ಹಸು ಮಗುವಿನಂಥಾ ಚಿಗುರುಗಳ ನಗುವಿನಲ್ಲಿ,

ಇಬ್ಬನಿಯ ಮುತ್ತುಗಳು ಹಗುರಾಗಿ ಹರಡಿರುವಲ್ಲಿ,

ತಂಗಾಳಿಯು ತನ್ನ ತಂಪು ಸೆರಗು ಪಟಪಟಿಸುತ್ತಿರಲು,

ನದಿಯ ಹೆಜ್ಜೆಯ ಗೆಜ್ಜೆ ದನಿ ನಿನಾದ ಕೇಳುತ್ತಿರಲು,

ಈ ಹಸಿರು ಚಾಮರಗಳು ನನ್ನ ಕರೆದವು.

ಈ ಹಸಿರು ಚಾಮರಗಳು`ನಲಿವಿನಿಂದ' ನನ್ನ ಕರೆದವು.

ಮಂತ್ರಮುಗ್ಧಳಂತೆ ನಾನು ಅವುಗಳ ಬಳಿ ಸಾರಿದೆ.....

Wednesday, September 20, 2006

ಮಧುಕರಿಗಳೇ ಬನ್ನೀ...



ಮಧು ಮಾಸ ಬಂದಿಹುದು ಮಧುಕರಿಗಳೇ ಬನ್ನಿ

ಮಧುರಕರ ಗೀತಗಳಿಗಾವು ನಲಿವಾ

ಹೃದಯದಾಸೆಗಳೆಲ್ಲಾ ಫಲಿತವಾಗುವ ಕಾಲ...

ಮೃದುಹೃದಯ ಕುಸುಮಗಳು ಅರಳ್ವ ಕಾಲ...

ಮಧುಕರಿಗಳು ಮತ್ತಿನಿಂದ ಮಧುಹೀರುತ್ತಾ ಈ ಮಧುರ ಅನುಭೂತಿ ಹೊಂದುತ್ತಾ ಇದ್ದದ್ದು ಕಂಡಿದ್ದು ಸ್ಯಾನ್ ಹೋಸೆಯ ಉದ್ಯಾನವೊಂದರಲ್ಲಿ...

ನಮ್ಮ ಕವಿಗಳೆಲ್ಲಾ ಮಧುಕರಿಗಳ ಮಧುರಾನುಭವಗಳನ್ನೇ

ನೆನಪು ಮಾಡಿದರೆ ಇಂಗ್ಲೀಷಿನಲ್ಲಿ ಒಂದೆರಡು ನಗು ಮಿಂಚಿಸುವ

ಹಾಡುಗಳು ಅಲ್ಲಲ್ಲಿ ಸಿಗುತ್ತವೆ ಅಂಥಾ ಎರಡು ನಿಮಗಾಗಿ ಇಲ್ಲಿವೆ..

What do you suppose?

A bee sat on my nose.

Then what do you think?

He gave me a wink.

And said, "I beg your pardon,

I thought you were a garden."
*********************************
Bees that buzz

At my elbows and knees

No sir, I'm not

Fond of these.

But bees that buzz

Near flowers and stem,

Making honey --I like them.

Mmmmm!
.

Tuesday, September 19, 2006

......ಬಾರೇ ಬೇಗ ಸಖೀ...!

ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖೀ...' ಎಂಬುದು ಗೋಪಿಯೊಬ್ಬಳ ಧಾವಂತ.ಸುತ್ತೀ ಸುತ್ತೀ ಕಾಲು ನೋಯುತ್ತಿದೆ ಎಂದು ಬೆಂಚು ಕಂಡ ತಕ್ಷಣ `ಕೂರುವ ಬಾರೇ ಬೇಗ ಸಖೀ...' ಎಂಬುದು` ಸೌತ್ ಟಾಹೋ' ನಲ್ಲಿ ಸಖಿಯೊಬ್ಬಳ ಅಳಲು!

ಕೂರಲು ನೋಡಿದರೆ ಬೆಂಚಿನ ಮೇಲೆ ಜಾಗವೆಲ್ಲಿದೇ...?

ರಾತ್ರೆಯೆಲ್ಲಾ ಬಿದ್ದ ಮಲ್ಲಿಗೆ ಬಿಳುಪಿನ ಮಂಜು,

ಮಿಸ್ಸು "ಮಂಜೂ..." ಅಂತ ಅಟೆಂಡೆಂನ್ಸ್ ಕೂಗುವ ಮೊದಲೇ

`ಎಸ್ಸ್ ಮಿಸ್ಸ್..." ಅನ್ನುತ್ತಾ ಬೆಂಚಿನ ಪೂರ್ತಿ ಕೂತು ಬಿಟ್ಟಿದೆ!

ಲೇಟ್ ಲತೀಫ್ ಗಳಿಗೆ ಇಲ್ಲಿ ಜಾಗವೇ ಇಲ್ಲಾ...

Monday, September 18, 2006

ಕನ್ನಡಿ ಮಾತಾಡಿದಾಗ...

ಆಯಿನಾ ಮುಜ್ ಸೆ ಮೇರೀ ಪೆಹೆಲೆಸೀ ಸೂರತ್ ಮಾಂಗೇ...
ಮೇರಿ ಅಪನೇ ಮೇರೀ ಹೋನೇ ಕಿ ನಿಶಾನಿ..ಮಾಂಗೇ...

ತಲತ್ ಅಝೀಜ್ ಹಾಡಿರುವ ಈ ಹಾಡು ಕೇಳುತ್ತಾ ಒಂದು ಕ್ಷಣ ಯೋಚಿಸಿದೆ
ಕನ್ನಡಿ ನಿಜವಾಗಿಯೂ ನಮ್ಮನ್ನ ಒಂದು ಬೆಳಗ್ಗೆ ನಮ್ಮ `ಪೆಹೆಲೆ ಸೀ ಸೂರತ್' ಕೇಳಿದರೇ.... ಹೇಗೆ ತಂದು ಕೊಡುವುದು ಹತ್ತು ವರುಷದ ಹಿಂದಿನ ಆ ಚೆಂದದ ಮೊಗವನ್ನಾ...?

ಎಲ್ಲಿಂದ ತಂದು ಅದರ ಮುಂದೆ ನಿಲ್ಲಿಸುವುದು`ಕಣ್ಣಲ್ಲಿ ಹುಚ್ಚೆದ್ದ ಹೊಂಗನಸು ' ತುಂಬಿರುವ ಆ ಮುಗ್ಧ ಮುಖವನ್ನು...? ಗೊತ್ತಾಗಲಿಲ್ಲಾ....
ಹಾಗೇ `ನಮ್ಮವರು' ಅಂದುಕೊಂಡವರೇ ನಮ್ಮ ಅಸ್ಥಿತ್ವಕ್ಕೊಂದು ಸಾಕ್ಷಿ ಕೇಳಿದರೆ? ನಮ್ಮ `ಇರುವಿಕೆ' ಒಪ್ಪಿಕೊಳ್ಳಲೂ ನನ್ನವರು ಅಂದು ಕೊಂಡವರು ಪುರಾವೆಗಳನ್ನು ಕೇಳುವಂತಾಗುವ ಸ್ಥಿತಿ......ಮುಂದೆ ಯೋಚಿಸಲೂ ಮನಸ್ಸಾಗಲಿಲ್ಲಾ...

ಜುಳು ಜುಳು ಹರಿವ ನದಿಯಲ್ಲಿ ಮುಖ ನೋಡಿಕೊಳ್ಳುತ್ತಾ ನಿಂತ ಈ ಬಿಂಕದ ಸಿಂಗಾರಿಯರನ್ನು ನೋಡಿ...
ನಮ್ಮ ತರ `ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ಅಲ್ಲವಲ್ಲಾ' ಇವರುಗಳದ್ದು...
ಪ್ರತಿ ವರುಷವೂ ಚಿಗುರಿದಾಗ ಬಾಲ್ಯ..ಹೂ ತಳೆದಾಗ ಹರೆಯ! ಹೊಟ್ಟೆ ಕಿಚ್ಚಾಯಿತು ನನಗೆ.

` ಸೂರತ್' ಕಥೆ ಹಾಗಿರಲೀ ಅದು ಕಾಲನ ಕುಡುಗೋಲಿಗೆ ಸಿಕ್ಕಿಬೀಳದೇ ವಿಧಿ ಇಲ್ಲಾ...ಆದರೆ ಮನಸ್ಸೆಂಬಾ ಈ ಮನಸ್ಸನ್ನು ಮುಟ್ಟಲು ಯಾವ ಕಾಲಪುರುಷನಿಗೆ ಸಾಧ್ಯ?ಅದಕ್ಕೆ ಹರಯದ ಹುರುಪು ತುಂಬುವುದೂ, ಮುದಿ ಹತ್ತಿಸಿ ಮುಪ್ಪು ತಂದುಕೊಳ್ಳುವುದೂ ನಮ್ಮ ಕೈಲೇ ಇದೆ ಅಲ್ಲವಾ? ಅನ್ನಿಸಿತು

ನಮ್ಮ ಇರುವಿಕೆಗೆ ಪುರಾವೆ ಕೇಳುವವರು ನಿಜವಾಗಿಯೂ ನಮ್ಮವರೇನಾ? ಖಂಡಿತಾ ಇರಲಾರರು

ಹೀಗೆ ಯೋಚಿಸಿದ ಮೇಲೆ ಮನಸ್ಸು ಹಗುರವಾಯಿತು, ತಿಳಿಯಾಯಿತು....

Sunday, September 17, 2006

ಮನದಂಗಳದಲ್ಲೊಂದು ಹಾಡು, ಹಸೆ.....


ಮೊನ್ನೆ ಮತ್ತೊಮ್ಮೆ ಕೆ.ಎಸ್.ನರಸಿಂಹ ಸ್ವಾಮಿಯವರ `ಹಾಡು-ಹಸೆ' ಓದಿದೆ.ಹಾಡು -ಹಸೆ ಕೆ.ಎಸ್.ನ ಅವರ ಹಲವು ಕವನ ಸಂಕಲನಗಳಿಂದ ಆಯ್ದ ಕವನ ಮಲ್ಲಿಗೆಗಳ ಮಾಲೆ ಮತ್ತೆ ಮತ್ತೆ ಓದಿದರೂ ಮನಕ್ಕೆ ತೃಪ್ತಿಯಾಗದು ಇಲ್ಲಿನ ಎಲ್ಲಾ ಕವನಗಳನ್ನೂ ಅವುಗಳ ಮೂಲ ಸಂಕಲನಗಳಲ್ಲಿ ಓದಿದ್ದೆನಾದರೂ`ಹಾಡು -ಹಸೆ' ಮತ್ತೊಮ್ಮೆ 'ಅಂದು ಅವುಗಳನ್ನು ಸವಿದು ಸುಖಿಸಿದ ನೆನಪು 'ಕೊಟ್ಟಿತು
ಮದುವೆಯಾಗಿ ಅಮ್ಮನ ಮನೆ ಬಿಟ್ಟು ಬಂದ ಮೇಲೆ ಅಮ್ಮನ ಮನೆಗೆ ಹೋಗುವುದು ವರುಷಕ್ಕೆ ಎರಡೋ ಮೂರೋ ಬಾರಿ ಅಷ್ಟೇ...ಹೀಗೆ ಯಾವಾಗಲೋ ಒಮ್ಮೆ ಹೋದಾಗ ಅಮ್ಮ ಮಾಡಿದ ನಮಗಿಷ್ಟದ ಸಿಹಿ ತಿಂದ ಘಳಿಗೆ, ಚಿಕ್ಕವರಿದ್ದಾಗ ಅದೇ ಸಿಹಿಯನ್ನು ಅಮ್ಮ ಮಾಡಿಕೊಟ್ಟಿದ್ದು ನೆನೆಸಿ ಕೊಂಡು ಅಮ್ಮಾ.....ನೀನವತ್ತು ಮಾಡಿದ್ದೆಯಲ್ಲಾ ಈಗ ಇದನ್ನ ತಿನ್ನುವಾಗ ಅದೇ ನೆನಪು ಬರುತ್ತೇ..." ಅಂತಾ ನೆನೆಸಿ ಕೊಳ್ತೀವಲ್ಲಾ ಹಾಗೇ ಅನ್ನಿಸಿತು `ಹಾಡು-ಹಸೆ ಓದಿದಾಗ....'
ಚಂದ್ರ ನಾಥ ಆಚಾರ್ಯರು ತಮ್ಮ ಸಿರಿ ಕುಂಚದಿದ ಕಡೆದಿರುವ ಕೆ.ಎನ್ .ನ ರ `ಕಲ್ಪನಾ ಸುಂದರಿ'ಯ ಮುಖಪುಟದ ಚಿತ್ರದೊಂದಿಗೆ ಕವನದ ಕೆಲ ಸಾಲುಗಳು.....

ಅಡಿಯ ಮಟ್ಟ ನೀಳ ಜಡೆ
ಮುಡಿಯ ತುಂಬ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆ ಹೆಜ್ಜೆಗೆ ಒಂದು
ದೊಡ್ಡ ಮಲ್ಲಿಗೆ


ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆಇಂಪು
ಮೋಹದ ಮಲ್ಲಿಗೆಯ ಕಂಪು
ಕರೆದುವೆನ್ನನು ನಾನು
ಹಿಡಿಯ ಹೋದೆನು....

ಜೀವನದಲ್ಲಿ ಸಾಹಿತ್ಯ, ಸಂಗೀತ,ತಿಳಿವಿನ "ಸಾಧನೆ "ಗಳ ಇಂಥಾ" ಕಲ್ಪನಾಸುಂದರಿ" ಯನ್ನು
ಬೆನ್ನು ಹತ್ತಿದ ಎಲ್ಲರಿಗೂ ಶುಭವಾಗಲೀ.... ಅಂತಾ ಆಶಿಸುತ್ತಾ...

Saturday, September 16, 2006

ಪುಟಾಣಿ ಬಕಾಸುರನೊಂದಿಗೆ ನಾದಲೋಕ ಯಾನ....



ಸಂಗೀತ ಮತ್ತು ಸಿನಿಮಾ ಲೋಕದಲ್ಲಿ ವಿಹರಿಸಲು ಮನೆಗೊಂದು

ಹೊಸ ಆಟಿಕೆ ಬಂದಿದೆ.ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಆಗಿದೆ!

`ಕ್ರಿಯೇಟಿವ್ ಝೆನ್'(personal multi media player)ಎಂಬ ಈ ಪುಟಾಣಿ ಬಕಾಸುರ

ತಲಾ ನಾಲ್ಕು ನಿಮಿಷದ ಹದಿನೈದು ಸಾವಿರ ಹಾಡುಗಳನ್ನೂ,120 ಘಂಟೆ ಗಳಷ್ಟು

ಸಿನಿಮಾವನ್ನೂ(in any formet) ಸಾವಿರಾರು ಫೋಟೋಗಳನ್ನ ಹೊಟ್ಟೆಯಲ್ಲಿ

ತುಂಬಿಸಿಟ್ಟುಕೊಳ್ಳುತ್ತದೆ ಜೊತೆಗೆ F.M ರೇಡಿಯೋ ಮತ್ತು ರೆಕಾರ್ಡರ್ ಇವೆ

ಸಂಗೀತ ಸಾಗರದಲ್ಲಿ ತನ್ಮಯಳಾಗಿ ತೇಲಲು ನನಗೆ

ಇದೊಂದು ಪುಟ್ಟ ಹೊಸ ದೋಣಿ ವಿತ್ ಪುಟಾಣಿ ಹುಟ್ಟು!

ಖುಶಿಯಿಂದ ಹುಟ್ಟು ಹಾಕುತ್ತಾ ಹೊರಟಿರುವೆ ಯಾನ...

ಯಾವ ತೀರ ಸೇರಿಸುತ್ತೋ ಬಲ್ಲವರಾರು?

Friday, September 15, 2006

ಹೂವಿನ ತುಟಿಯಲಿ ಮುಗುಳು ನಗೆ...

ಚುಮು ಚುಮು ನಸುಕಿನಲಿ ಅಂಗಳಕ್ಕೆ ಹೋದಾಗ
ಮೆಲ್ಲ ಮೆಲ್ಲನೆ ಬೀಸುತ್ತಿದ್ದ ತಂಪು ಗಾಳಿಯಲ್ಲಿ
ಓಲಾಡುತ್ತಾ ಹೂವು ನಗುತ್ತಿತ್ತು.

ಹೂವಿನ ತುಟಿಯಲಿ ಮುಗುಳು ನಗೆ
ಸುರಹೊನ್ನೆಗೆ ಚಿನ್ನದ ನೆರಳು
ಮೋಡದೂರಿನಲಿ ಮುತ್ತಿನ ತೇರು
ತಂಪಿನ ಹೆರಳು ಗಾಳಿಗೇ...
ಉಳಿಯಲಿ ಉಳಿಯಲಿ ನಾಳೆಗೇ ...

ಹೂವಿನ ಈ ಮುಗುಳು ನಗುವಿಗೆ ಕಾರಣವೇನೋ...

ಹೂವೇ...ಹೂವೇ...
ನಿನ್ನೀ ನಗುವಿಗೆ ಕಾರಣವೇನೆ...
ಸೂರ್ಯನ ನಿಯಮಾನೇ ...
ಚಂದ್ರನ ನೆನಪೇನೇ...

ಹೂವಿನ ಅಂದವನ್ನು ಕಂಡ ಪಥಿಕ ನೊಬ್ಬ
ತನ್ನ ಪ್ರೇಮಿಕೆಯನ್ನು ನೆನೆಸಿಕೊಂಡು
ಹೀಗೆ ಹೇಳಿದ್ದು ಅಸ್ಪಷ್ಟವಾಗಿ,
ಗಾಳಿಯಲ್ಲಿತೇಲಿಬಂತು....

ಹೂವೇ...ಮರೆಸಿಕೊ ಮೊಗವಾ
ಆ ಚೆಲುವಿಗೇ...ಆ ಸೊಬಗಿಗೇ...
ನೀ...ಸರಿ-ಸಮ,
ಇಲ್ಲಾ...ಇಲ್ಲಾ..ಇಲ್ಲಾ...

ಬಾಲ ಸೂರ್ಯ ಮೈಮುರಿದು ಮೇಲೇಳುತ್ತಿದ್ದ
ಅವನ ಜೊತೆ ದಿನದ`ರೇಸು' ಓಡಲುನಾನು ಒಳಬಂದೆ.
ಹೂವು ನಗುತ್ತಲೇ ಇತ್ತು...


Thursday, September 14, 2006

ಕವಡೆಯ ಕಥೆ



ನೆನಪಿದೆಯೇ ನಿನಗೆ

ನಾವಿಬ್ಬರೂ ಅಂದು

ಕೆರೆಯ ದಡದಲ್ಲಿ ಮಿಂದು

ಮರಳ ಮನೆಗಳ ಕಟ್ಟಿ

ಆಟವಾಡಿದ (?) ದಿವಸಾ...

ನೆನಪಿದೆಯೇ...ನಿನಗೇ...

ಎಂಬ ಹಾಡು ನೆನಪಾಗುತ್ತಿದೆ ನನಗೆ ನನಗೆ ಬಿಟ್ಟರೆ ಈ ಕವನವನ್ನು(ಮೂಲ ಕವಿಯ ಕ್ಷಮೆ ಕೋರಿ)

ನೆನಪಿದೆಯೇ ನಿನಗೇ

ನಾವೆಲ್ಲರೂ ಅಂದು

ನಮ್ಮ ಮನೆ ಅಂಗಳಕ್ಕೆ ಬಂದು

ಸೀಮೇ ಸುಣ್ಣದ ಗೆರೆಗಳ ಕೊರೆದು

ಚೌಕಾ ಬಾರವಾ ಆಡಿ

ನನ್ನ ಕಾಯಿ ನೀನು ಹೊಡೆದು

ನಿನ್ನ ಕಾಯಿ ನಾನು ಹೊಡೆದು

ನೀನೇ ಮೋಸಾ ಅಂತಾ ನಾನು

ಇಲ್ಲಾ ನೀನೇ ಮೋಸಾ ಅಂತಾ ನೀನು

ಜುಟ್ಟು-ಜುಟ್ಟು ಹಿಡಿದು ಹೊಡೆದಾಡಿದ ದಿವಸ...

ನೆನಪಿದೆಯೇ ನಿನಗೇ...

ಅಂತಾ ಬದಲಾಯಿಸಿ ನನ್ನ ಬಾಲ್ಯದ ಗೆಳತಿಯರಿಗೆ ಕೇಳುತ್ತೇನೆ!

ಬೇಸಿಗೆ ರಜದಲ್ಲಿ ಚೌಕಾಬಾರ ಆಡುವುದು ನಮ್ಮ ಅಚ್ಚು ಮೆಚ್ಚಿನ ಟೈಂಪಾಸ್ ಆಗಿತ್ತು.ಬೇಗ ಬೇಗ ಗರಗಳನ್ನು ಉರುಳಿಸಿ ನಮ್ಮನಮ್ಮ ಕಾಯಿಗಳನ್ನು ಹಣ್ಣು ಮಾಡುವ ಸಡಗರ. ನನ್ನ ಕಾಯಿ ಹೊಡೆದೆ ಅಲ್ವಾ ನೀನು ಬಾ..ಬಾ.. ನನ್ನ ಮನೆ ಹ್ಯಾಗೆ ದಾಟಿ ಹೋಗ್ತೀಯಾ ನೋಡ್ತೀನಿ ಎಂಬ ಸವಾಲುಗಳು ಜೋಡಿ ಮಾಡಿ ಬಿಟ್ಟರೆ ಯಾರೂ ಹೊಡೆಯಕ್ಕೆ ಆಗಲ್ಲಾ ಎಂಬ ಉಪಾಯ.ತನಗೆ ಇನ್ನೊಬ್ಬಳ ಕಾಯಿ ಹೊಡೆಯುವ ಚಾನ್ಸ್ ಸಿಕ್ಕರೂ ಬೇರೆ ಕಾಯಿ ನಡೆಸಿ ಗೆಳತಿಯ ಕಾಯಿಗೆ `ಜೀವದಾನ'ಮಾಡುವ ದೊಡ್ಡ ಮನಸ್ಸು. ಅಂಥಾ ದೊಡ್ಡ ಮನಸ್ಸು ತೋರಿಸಿದ ಗೆಳತಿಗೆ ಕಣ್ಣಲ್ಲೇ ಒಂದು ಥ್ಯಾಂಕ್ಸ್ ಹೇಳಿ ನಾನೂ ಸಮಯ ಬಂದಾಗ ನಿನ್ನ ಋಣ ತೀರಿಸುತ್ತೀನಿ ಎಂದು ಕೊಡುವ ಭರವಸೆಗಳು...ಎಷ್ಟೊಂದು ಚಿತ್ರಗಳು!

ಈ ಕವಡೆಗಳ ಪೂರ್ವಾಶ್ರಮದ ಬಗ್ಗೆ ಕೆದಕಿದಾಗ ಗೊತ್ತಾಗಿದ್ದಿಷ್ಟು...cypraeidae ವರ್ಗಕ್ಕೆ ಸೇರಿದ ಕವಡೆಗಳಲ್ಲಿ ಸುಮಾರು 200 ಜಾತಿಯಗಳಿವೆ ಈ ಎಲ್ಲವಕ್ಕೂ ಬೇಸಿಕ್ ಶೇಪ್ ಒಂದೇತರ ಇರುತ್ತೆ ಉಷ್ಣ ವಲಯದ ದೇಶಗಳಲ್ಲಿ ಕವಡೆಪ್ರಾಣಿಗಳು ಹೆಚ್ಚಾಗಿ ಕಂಡು ಬರುತ್ತವೆ.ಪುಟಾಣಿ ಕವಡೆಯೊಂದು 5ಮಿ ಮೀ ಇದ್ದರೆ ದೊಡ್ದದಾದ ಟೈಗರ್ ಕವಡೆ ‍ 15 ಸೆ.ಮೀ (ಆರು ಇಂಚು) ದೊಡ್ಡದಾಗಿರುತ್ತದೆ.ಹಿಂದಿನ ಕಾಲದಲ್ಲಿ ಕವಡೆಗಳನ್ನು ಆದಿವಾಸಿಗಳು ಅಲಂಕಾರವಾಗಿಯೂ,ಹಲವಾರು ನಾಗರೀಕತೆಗಳಲ್ಲಿ ಕರೆನ್ಸಿ ರೂಪದಲ್ಲೂ ಬಳಸುತ್ತಿದ್ದರು.

ಬೇರೆಲ್ಲಾ ಚಿಪ್ಪಿರುವ ಸಮುದ್ರ ಜೀವಿಗಳ ಚಿಪ್ಪಿನ ಒಳಭಾಗ ಹೊಳಪಿನ ಚಿತ್ತಾರಗಳಿಂದ ಕೂಡಿದ್ದರೆ ಕವಡೆಗಳ ಹೊರಮೈ ಹೊಳಪಾಗಿದ್ದು ಚಿತ್ರ ವಿಚಿತ್ರ ಚಿತ್ತಾರ ಹೊಂದಿದೆ ಬೇರೆಲ್ಲಾ ಇಂಥಾ ಚಿಪ್ಪಿನ ಜೀವಿಗಳು ಚಿಪ್ಪಿನೊಳಗೇ ಕೂತು ಜೊಲ್ಲುರಸ ಸುರಿಸಿದರೆ ಕವಡೆ ಜೀವಿಯ`ಮ್ಯಾಂಟಲ್' ಕವಡೆಯ ಬೆನ್ನ ಮೇಲೆ ಹರಡಿಕೊಂಡು ಜೊಲ್ಲು ಸುರಿಸಿ ಚಿತ್ತಾರ ಬರೆಯುವುದೇ ಇದಕ್ಕೆ ಕಾರಣ.ಕವಡೆಗಳ ಈ ನೈಸರ್ಗಿಕ ಹೊಳಪು,ಚಿತ್ತಾರದ ಕಾರಣಕ್ಕಾಗಿಯೇ ಇವು ಸಂಗ್ರಾಹಕರ ಅಚ್ಚುಮೆಚ್ಚು.

ಇತ್ತಿಚಿಗೆ ಇಲ್ಲಿನ ಗಿಫ್ಟ್ ಶಾಪ್ ಒಂದರಲ್ಲಿ ಈ ಕವಡೆಗಳನ್ನು ಕಂಡಾಗ ಹಳೆ ಗೆಳತಿಯರನ್ನು ಕಂಡಂತೆ ಆಯಿತು.ಮನೆಗೆ ಕರೆತಂದು ಅಂಗೈಯಲ್ಲಿ ಅವಿಚಿ ಹಿಡಿದುಕೊಂಡರೆ ಏನೆಲ್ಲಾ ನೆನಪುಗಳು!ಕವಡೆಯ ಬೆನ್ನ ಮೇಲಿನ ಚಿತ್ತಾರದಷ್ಟೇ ಮೋಹಕ ನೆನಪುಗಳು....


Wednesday, September 13, 2006

ಶ್ರೀಮಾನ್ ಸಕ್ಕರೇ ಡಬ್ಬೇಶ್ವರರು

ಮೇಲಿನ ಚಿತ್ರದಲ್ಲಿ ಕಾಣುತ್ತಿರುವವರು ಛೇ...ಛೇ...ತಪ್ಪು...ತಪ್ಪು....ವಿರಾಜಿಸುತ್ತಿರುವವರು ನಮ್ಮಅಡುಗೆ ಮನೆ ಸಂಸ್ಥಾನದ ಮುಖ್ಯ ಮಂತ್ರಿಗಳಾದ ಶ್ರೀಮಾನ್ ಸಕ್ಕರೆ ಡಬ್ಬೇಶ್ವರರು. ಶ್ರೀ ಸ.ಡ ರು ಅಧಿಕಾರ ವಹಿಸಿಕೊಂಡಾಗ ಎಲ್ಲರಂತೆ (ಅಂದರೆ ಸಂಸ್ಥಾನದ ಇತರ ಹಿರಿ, ಮರಿ,ಕಿರಿ,ಕಿರಿ-ಕಿರಿ ಡಬ್ಬಾ ಪ್ರಜೆಗಳಂತೆ) ನೆಟ್ಟಗೇ ಇದ್ದರು.ಸ್ವಲ್ಪ ದಿನ ಒಳ್ಳೊಳ್ಳೆ ಕೆಲಸಗಳನ್ನೂ ಮಾಡಿದರು ಸಕ್ಕರೆ ಸಿಹಿ ಮಾತುಗಳನ್ನೂ ಆಡಿದರು.ಕೆಲವೇ ದಿನಗಳಲ್ಲಿ ಹತ್ತಿತಲ್ಲಾ ಅಧಿಕಾರದ ರುಚಿ!
ಬೆಳಗಿನ ಕಾಫೀಗೂ ನಾನೇ...ಸೀರಿಯಲ್ (ಇಲ್ಲಿ ಬೆಳಗ್ಗೆ ಕಷ್ಟ ಪಟ್ಟು ತಿನ್ನುವ ಕಾರ್ನ್ ಫ್ಲೇಕ್ಸ್ ಎಂಬತೌಡು!)ನಲ್ಲೂ ನಾನೇ...ವೀಕೆಂಡ್ ನಲ್ಲಂತೂ ನಾನೇ....ನಾನೇ... ಅಂತ ಸಮಯ ಸಿಕ್ಕಾಗಲೆಲ್ಲಾ ಸ್ವಪ್ರಶಂಸೆ ಮಾಡಿಕೊಳ್ಳಲಾರಂಭಿಸಿ ಬಿಟ್ಟರು.

ಅರವಿಂದ ಈ ಸ.ಡ ರ ಪುರಾಣ ಕೇಳೀ ಕೇಳೀ ಒಮ್ಮೆ ಕೋಪ ಬಂದು `ತಾಳು ನಿನಗೆ ಸ್ವಲ್ಪ ಬಿಸಿ ಮುಟ್ಟುಸ್ತೀನಿ`ಅಂತಾನೋ ಏನೋ ಕಾಫಿಗೊಂದು ಚಮಚ ಬೆಳಗ್ಗೆ ಸಕ್ಕರೆ ಹಾಕಿಕೊಂಡವನು ಶ್ರೀ ಸ.ಡ ರನ್ನು ಒಲೆಯ ಪಕ್ಕದಲ್ಲೇ ಕುಕ್ಕಿ ಹೋಗಿದ್ದ.(ಆಮೇಲೆ ನನ್ನ ಹತ್ರ `ನಂಗೆ ಮರೆತು ಹೋಯಿತು' ಅಂತಾ ಹೇಳಿದನಾದರೂ ಅವನು ಬೇಕಂತ್ಲೇ ಮಾಡಿದ್ದೆಂದು ನನಗೆ ಗುಮಾನಿ!) ಇರಲಿ,ಎಲೆಕ್ಟ್ರಿಕ್ ಒಲೆಯ ಬಿಸಿಗೆ ಶ್ರೀ ಸ.ಡ ರ ಮೂತಿ ನಮ್ಮ ಮಾಜಿ ಮುಖ್ಯ ಮಂತ್ರಿಗಳೊಬ್ಬರನ್ನು ನೆನಪಿಸುವಂತೆ ಆಗಿಬಿಟ್ಟಿತ್ತು!

ಶ್ರೀ ಸ.ಡ.ನನ್ನ ಹತ್ತಿರ ದೂರು ಮಾಡಲು ಬಂದರು. ನಮ್ಮ ಶ್ರೀಮತಿ ಇಟಲಿ ಮಾತೆಯವರು ಅವರಕೈ ಕೆಳಗಿನ ಮು.ಮ ಗಳ ಮಾತುಗಳನ್ನು `ಉಫ್' ಅನ್ನಿಸುವಂತೆ ಶ್ರೀ ಸ.ಡ.ಅವರ ಮಾತುಗಳನ್ನು ನಾನು ನಿರ್ಲಕ್ಷಿಸಿ ಬಿಟ್ಟೆ. ಅಷ್ಟಕ್ಕೇ ಶ್ರೀ ಸ.ಡ ಅವರು ತೆಪ್ಪಗಾಗಿ ತಮ್ಮ ಬುದ್ದಿ ಕುದುರಿಸಿಕೊಳ್ಳುತ್ತಾರೆಂದು ಥೇಟ್ ಶ್ರೀಮತಿ ಇ.ಮಾ ರಂತೆ ನಾನು ನಿರೀಕ್ಷಿಸಿದ್ದೆ
ನನ್ನ ಲೆಕ್ಕ ತಪ್ಪಾಯಿತು!

ಶ್ರೀ ಸ.ಡ ಪ್ರತಿ ದಿನ ಹೊಸ ಹೊಸ ಆಟ ಕಟ್ಟಲಾರಂಭಿಸಿದರು.ನನಗೂ ಒಮ್ಮೆ ಸಹನೆ ಮೀರಿ ಒಂದು ರಾತ್ರಿ ಅಡುಗೆ ಮುಗಿಸಿದವಳು ಶ್ರೀ ಸ.ಡ ರನ್ನು ಒಲೆ ಪಕ್ಕವೇ ಬಿಟ್ಟು ಹೊರನಡೆದೆ. ಶ್ರೀ ಸ.ಡ ರ ಮೂತಿಯ ಇನ್ನೊಂದು ಸೈಡ್ ಗೂ ಲಕ್ವ ಹೊಡೆದದ್ದು ಹೀಗೆ! ಸ್ವಯಂಕೃತಾಪರಾಧ !!

ಈಗ ಅಡುಗೇ ಮನೆ ಸಂಸ್ಥಾನದ ಹಿರಿಯ,ಕಿರಿಯ ಡಬ್ಬಾ ಪ್ರಜೆಗಳಿಗೆ ಈ ಮುಖ್ಯಮಂತ್ರಿ ಬೇಡವಂತೆ. ಹಾಗೆಂದು ಮೊನ್ನೆ ನಡೆದ ಚುನಾವಣೆಯಲ್ಲಿ ಸ್ಪಷ್ಟವಾಗಿ ಸಾರಿಬಿಟ್ಟಿದ್ದಾರೆ. ಸೋ ಈಗ ಶ್ರೀ ಸಕ್ಕರೇ ಡಬ್ಬೇಶ್ವರರು ಕುರ್ಚಿತ್ಯಾಗ ಮಾಡ ಬೇಕಾಗಿ ಬಂದಿದೆ. ಅಧಿಕಾರ ಬಿಡುವ ಮುಂಚೆ ಒಮ್ಮೆ ನಿಮ್ಮ ಬ್ಲಾಗಿನಲ್ಲಿ ನನ್ನದೊಂದು ಫೋಟೋ ಹಾಕಿ ಅಂತ ಮೊನ್ನೆ ನನ್ನ ಬಳಿ ಬಂದು ತುಂಬಾ ಕೇಳಿ ಕೊಂಡರು.ನಮ್ಮ ಸಂಸ್ಥಾನಕ್ಕೆ ಅಷ್ಟಿಷ್ಟು ಸೇವೆ ಮಾಡಿದ್ದಾರೆ ಪಾಪ ಈಗ ಮನೆಗೆ ಹೋಗುತ್ತಿದ್ದಾರೆ.ಯಾಕೆ ಅವರನ್ನು ನೋಯಿಸುವುದೂ ಅಂತಾ ನಾನು ಇವತ್ತು ಅವರ ಫೋಟೋ ಹಾಕಿದ್ದು.ಶ್ರೀ ಸ.ಡ ಅವರ ವಿಶ್ರಾಂತ ಜೀವನಕ್ಕೆ ನಾವೆಲ್ಲಾ ಶುಭ ಹಾರೈಸೋಣವೇ...

Tuesday, September 12, 2006

ಪುಟ್ಟ ಪುಟ್ಟ ಹೆಜ್ಜೆ



ಈ ಬೆಣ್ಣೆ ಬಂಗಾರದ ಬಣ್ಣದ ಕಾಲಚೀಲ ಜೋಡಿಯನ್ನು ನನ್ನ ಗೆಳತಿಯ ಮಗುವಿಗಾಗಿ ನಾನು ಹೆಣೆದಿದ್ದು.ಹೆಣೆದು ಮುಗಿಸಿ ಒಂದರ ಪಕ್ಕದಲ್ಲೊಂದು ಇಟ್ಟಾಗ ಎಷ್ಟು ಮುದ್ದಾಗಿ ನಕ್ಕು ಮಿಟುಕಿಸಿದವೆಂದರೇ......ಮಗು ಇವನ್ನು ಹಾಕಿಕೊಳ್ಳುವ ಮೊದಲೇ ಇವುಗಳೇ ಜೀವ ಬಂದು ಪುಟ್ಟಪುಟ್ಟ ಹೆಜ್ಜೆ ಹಾಕಲು ಶುರು ಮಾಡಿಬಿಡುತ್ತಾವೇನೋ ಅನ್ನಿಸಲು ಶುರುವಾಯಿತು ನನಗೆ...

ನೆನ್ನೆಯ ವೃತ್ತಾಂತದ ಕೊನೆಯ ಭಾಗ ಉಳಿದು ಹೋಗಿತ್ತು ಅದನ್ನಿವತ್ತು ಹೇಳಿಬಿಡುತ್ತೇನೆ ....

ನಾನೂ, ಸುಗಂಧಿಯೂ ನಂತರ ತುಂಬಾ ದಿನ ಭೇಟಿಯಾಗಲೇ ಇಲ್ಲಾ...ಕಳೆದ ವರುಷ ನಾನು ಸುಗಂಧಿಯ ಹೈದ್ರಾಬಾದ್ ನ ಮನೆಗೆ ಹೋದಾಗ ಆಗಷ್ಟೇ ಮೆಲ್ಲ ಮೆಲ್ಲನೆ ಬೆಳಗಾಗುತ್ತಿತ್ತು ನಾನೂ ಸುಗಂಧಿಯೂ ಟೀ ಕೈಲಿ ಹಿಡಿದು ಹಳೆ ಕಥೆಗಳ ವಿನಿಮಯ ನಡೆಸುತ್ತಿದ್ದಾಗ ಅಡುಗೆಮನೆ ಬಾಗಿಲಲ್ಲಿ ಪುಟಾಣಿ ನೆರಳೊಂದು ಕಾಣಿಸಿತು..ನಾನು ತಿರುಗಿ ನೋಡುವಷ್ಟರಲ್ಲಿ ಮಾಯ!ಸುಗಂಧಿ ನಕ್ಕು ನನ್ನನ್ನು ಪಕ್ಕದ ರೂಮ್ಗೆ ಕರೆದೊಯ್ದಳು.ಅದು ಧ್ರುವ್ ನ ರೂಂ. ಕೊಲಾಜ್ ಮಾಡಿದ್ದ ದೊಡ್ದ ಚಿತ್ರದ ಕಡೆ ಬೆರಳು ಮಾಡಿ ತೋರಿಸಿದಳು ಧ್ರುವ್ ನ ಹಲವು ಬಾಲಲೀಲೆಗಳ ಫೋಟೋ ಗಳ ನಟ್ಟ ನಡುವಲ್ಲಿ ಕೂತಿತ್ತು.....ಆ ಫೋಟೋ....ನಾಲ್ಕು ಮಾರು ಹೋದವಳು ಮಗು ಅಳುತ್ತಿದ್ದಾನೋ ಏನೋ ಎಂದು ಹಿಂದೆ ತಿರುಗಿ ನೋಡಿ ಸುಮ್ಮನೆ ಒಮ್ಮೆ ಕ್ಲಿಕ್ಕಿಸಿದಳಲ್ಲಾ..ಅದೇ ಫೋಟೋ...W.T.C ಯ ಎರಡು ಟವರ್ ಗಳ ಮಧ್ಯೆ ಧ್ರುವ್ ನನ್ನ ಮಡಿಲಲ್ಲಿ ಮಲಗಿ ಮುಗುಳು ನಗುತ್ತಿರುವ ಫೋಟೋ... ನಾನು ಅದನ್ನೇ ನೋಡುತ್ತಾ ಸುಮ್ಮನೆ ನಿಂತು ಬಿಟ್ಟೆ...ಎಷ್ಟು ಹೊತ್ತು ಹಾಗೇ ನಿಂತಿದ್ದೆನೋ...

ಸುಗಂಧಿ ಯ ಮಾತು ಮತ್ತೆ ಈ ಲೋಕಕ್ಕೆ ಎಳೆತಂತು."ನೋಡು ಯಾವಾಗ್ಲೂ ಕೇಳ್ತಿರ್ತೀಯಲ್ಲಾ ಯಾರು ಈ ಆಂಟಿ ಅಂತಾ ಇವರೇ ಆ ಆಂಟೀ...." ನಂತರ ನನಗೆ ಗೊತ್ತಾಗಿದ್ದು "ಆಗ ತಾನೆ ಹಾಲು ಕುಡಿದು ಬಿಳಿ ಮೀಸೆಯ ಬಾಯಿಯೊಂದಿಗೆ ಕಣ್ಣರಿಳಿಸಿಕೊಂಡು ನಗುತ್ತಾ ಪುಟ್ಟ ಫುಟ್ಟ ಹೆಜ್ಜೆಯಿಡುತ್ತಾ ಬಂದು ಧ್ರುವ್ ನನ್ನ ತೊಡೆಯೇರಿದ್ದು....."
ಈ ಬಂಗಾರದ ಬಣ್ಣದ ಪುಟ್ಟ ಕಾಲುಚೀಲ ಗಳು ಎಲ್ಲಾದರೂ ಪುಟುಪುಟು ಎಂದು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಮಾಯವಾಗುವ ಮೊದಲೇ ಇವುಗಳನ್ನು ಇವುಗಳ `ಪುಟ್ಟ ಯಜಮಾನನಿಗೆ' ತಲುಪಿಸಲು ಪ್ಯಾಕ್ ಮಾಡುತ್ತಾ...

Monday, September 11, 2006

ಐದು ವರುಷದ ಹಿಂದೆ.......



ನಾನೀಗ `ಗ್ರೌಂಡ್ ಝೀರೋ'ಗೆ ಹೋದ್ರೆ ಐದು ವರುಷದ ಹಿಂದೆ ಮ್ಯಾನ್ ಹ್ಯಾಟನ್ ನ ಬೀದಿಯಲ್ಲಿ ಅತ್ತಿತ್ತ ಅಲೆದಾಡಿದ್ದು ನೀನಲ್ಲವಾ...ಅಂತ ಅದು ಕೇಳುತ್ತಾ? ಗೊತ್ತಿಲ್ಲಾ...`ಎಷ್ಟು ಶಾಂತವಾಗಿದೆ ಅಲ್ಲಾ...ಒಳ್ಳೆ ಟೆಂಪಲ್ ತರ ಇದೆ ಅಲ್ವಾ...' ಅಂದ ಸುಗಂಧಿಗೆ `ಈಗ್ಲೂ ಇಲ್ಲಿ ಶಾಂತವಾಗೇ ಇದೆ.ಆದರೆ ನೀನವತ್ತು ಹೇಳಿದ ತರ ದೇವಸ್ಥಾನದ ನೆಮ್ಮದಿ ತರುವ ಶಾಂತಿಯಲ್ಲಾ...ಮಸಣದ ಮನೆಯ ನೀರವ ಶಾಂತಿ...' ಅಂತ ಹೇಳುತ್ತಾ? ಗೊತ್ತಿಲ್ಲಾ...

ಐದು ವರುಷದ ಹಿಂದೆ ಜುಲೈ9 ರಂದು ನಾನು,ಅರವಿಂದ್ ನಮ್ಮ ಸ್ನೇಹಿತ ದಂಪತಿಗಳಾದ ಕೆ.ಕೆ ಮತ್ತು ಸುಗಂಧಿ ಅವರ 9 ತಿಂಗಳ ಮಗು ಧ್ರುವ್ ನೊಂದಿಗೆ ವರ್ಲ್ಡ್ ಟ್ರೇಡ್ ಸೆಂಟರ್ ನ ನೋಡಲು ಹೋಗಿದ್ದೆವು.ತಲಾ 13 ಡಾಲರ್ ತೆತ್ತು ಮೇಲೆ ಹೋಗಿದ್ದೂ ಆಯಿತು.ಅಲ್ಲಿ W.T.C ಬಗ್ಗೆ ತೋರಿಸಿದ ಕಿರುಚಿತ್ರ ನೋಡಿಕೊಂಡು ಸಿಕ್ಕಷ್ಟೇ ಸಸ್ಯಾಹಾರಿ ಊಟ ತಿಂದು ಸುತ್ತ ಮುತ್ತವೆಲ್ಲಾ ಕಣ್ಣಾಡಿಸಿದೆವು. ನಾನು ಆಗಷ್ಟೇ ಹೊಸ ಕ್ಯಾಮ್ ಕಾರ್ಡರ್ ಕೊಂಡಿದ್ದರಿಂದ W.T.C ಯ ಮೂಲೆ ಮೂಲೆಯನ್ನೂ ಬಿಡದೆ ವಿಡಿಯೋ ತೆಗೆದಿದ್ದೂ ತೆಗೆದಿದ್ದೇ...

ನಂತರ ಅರವಿಂದ ಮತ್ತು ಕೆ.ಕೆ `ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್' ನೋಡಲು ಹೊರಟಾಗ ಬೆಳಗ್ಗೆಯಿಂದಾ ಸುತ್ತಿ ಸುಸ್ತಾಗಿದ್ದ ನಾನು `ನನ್ನ ಕೈಲಿ ಆಗಲ್ಲಪ್ಪಾ..ನಾನಿಲ್ಲೇ ಕೂರುತ್ತೀನಿ' ಅಂತ ಹೇಳಿದೆ. ಮಗು ಧ್ರುವ್ ಗೆ ನಿದ್ದೆ ಬಂದಿತ್ತಾದ್ದರಿಂದ ಸುಗಂಧಿಯೂ ನನ್ನೊಡನೆ ಕೂತಳು.`ಕಾರ್ ನಲ್ಲಿ ಕೂರಿ' ಅಂತ ಅರವಿಂದ ಹೇಳಿದನಾದರೂ `ಇಲ್ಲಾ ಇಲ್ಲೇ ಚೆನ್ನಾಗಿದೆ' ಅಂದೆ ನಾನು...

W.T.C ಯ ಎರಡು ಟವರ್ ಗಳ ಮಧ್ಯೆ ಇದ್ದ ವಿಶಾಲವಾದ ಜಾಗದಲ್ಲಿ ಸುಮಾರು 4 ಅಡಿಗಳಷ್ಟು ದೊಡ್ಡ ದೊಡ್ದ ಬಾಣಲೆಯಂಥಾ ಕುಂಡ ಗಳಲ್ಲಿ ಬಣ್ಣ ಬಣ್ಣದ ಹೂಗಿಡಗಳನ್ನು ಬೆಳೆಸಿದ್ದರು ಅಲ್ಲಿದ್ದ ಕಲ್ಲು ಬೆಂಚ್ ನ ಮೇಲೆ ಮೇಲೆ ನಾನು ಕೂತೆ. ಸುಗಂಧಿಯ ಕಣ್ಣು ಬಿಳಿಯನೊಬ್ಬ ಮಾರುತ್ತಿದ್ದ W.T.C ಯ ಪ್ರತಿಕೃತಿಯ ಮೇಲೆ ಬಿತ್ತಾದ್ದರಿಂದ ಅದನ್ನು ಕೊಳ್ಳಲು ಹೊರಟಳು.ಧ್ರುವ್ ನನ್ನ ಮಡಿಲಲ್ಲಿ ಮಲಗಿದ್ದ. ನಾಲ್ಕು ಮಾರು ಹೋದವಳು ಮಗು ಅಳುತ್ತಿದಾನೋ ಏನೋ ಎಂದು ಹಿಂದಿರುಗಿ ನೋಡಿ ಧ್ರುವ್ ನಗುತ್ತಿದ್ದದು ನೋಡಿ ತನ್ನ ಕೈಲಿದ್ದ ಕ್ಯಾಮರಾದಿಂದ ಸುಮ್ಮನೆ ಒಂದು ಸಲ ಕ್ಲಿಕ್ಕಿಸಿದಳು.

ಧ್ರುವ್ ಆರಾಮವಾಗಿ ಮಲಗಿದ್ದ...ನಾನು ಅತ್ತಿತ್ತ ಕಣ್ಣಾಡಿಸುತ್ತಿದ್ದೆ.ಸುಗಂಧಿ ಸುಮಾರು ಹೊತ್ತು ಚೌಕಾಸಿ ಮಾಡಿ ಗೆದ್ದ ನಗೆಯೊಂದಿಗೆ ನಾಲ್ಕಿಂಚಿನ W.T.C ಯ ಮೆಟಲ್ ನ ಪ್ರತಿಕೃತಿ ಕೈಯಲ್ಲಿ ಹಿಡಿದು ತಂದು ತೋರಿಸಿದಳು `ಅಛ್ಛಾ...ಹೇನಾ...ಮಜ್ ಬೂತ್ ಹೇ ಟೂಟೇಗಾ ನಹೀ...' ಅಂದಳು ( ಚೆನ್ನಾಗಿದೆ ಅಲ್ವಾ... ಗಟ್ಟಿಮುಟ್ಟಾಗಿದೆ....ಮುರಿಯುವುದಿಲ್ಲಾ...)
`ಹಾಂ..ಹಾಂ...ಬಹುತ್ ಅಛ್ಛಾ ಹೇ...ಮೆಟಲ್ ಕಾ ಹೇನಾ...ಮಜ್ ಬೂತ್ ಹೋನಾ ಹೀ ಚಾಯಿಯೇ....ಕೈಸೇ ಟೂಟೇಗಾ..? ಅಂದೆ ನಾನು.(ಹೌದೌದು...ತುಂಬಾ ಚೆನ್ನಾಗಿದೆ...ಮೆಟಲ್ ದಲ್ಲವಾ...ಗಟ್ಟಿಮುಟ್ಟಾಗಿಯೇ ಇರುತ್ತೆ...ಹೇಗೆ ಮುರಿಯಕ್ಕೆ ಸಾದ್ಯ...? )

ಏಂಥಾ ಐರನಿ!!!!!!!!!!!

ನನ್ನ ಪಕ್ಕದಲ್ಲಿ ಕೂತು ಅತ್ತಿತ್ತ ನೋಡಿ `ಕಿತ್ ನಾ ಶಾಂತ್ ಹೇನಾ ಯಹಾ...ಮಂದಿರ್ ಜೈಸಾ ಲಗ್ ರಹಾ ಹೇ' ಅಂದಳು.(ಎಷ್ಟು ಶಾಂತವಾಗಿದೆ ಇಲ್ಲಿ....ದೇವಸ್ಥಾನ ದಂತೆ ಅನ್ನಿಸುತ್ತಿದೆ)

ಅದಕ್ಕುತ್ತರವಾಗಿ ನಾನಂದೆ `ಹೌದಲ್ಲಾ........

ಅದಾಗಿ ಎರಡು ತಿಂಗಳಿಗೆ ಅದೇ ಸುಗಂಧಿ ಬೆಳಗಿನ ಜಾವಕ್ಕೆ ಪೋನ್ ಮಾಡಿ `W.T.C ಗೆ ಪ್ಲೇನ್ ಕ್ರ್ಯಾಶ್ ಆಗಿದೆ .ಒಂದು ಟವರ್ ಕುಸಿದು ಹೋಯಿತಂತೆ....'ಎಂದಳು .ಸ್ವಲ್ಪ ಹೊತ್ತಿನಲ್ಲೇ ಎರಡನೇ ಟವರ್ ಕೂಡಾ ನೋಡು ನೋಡುತ್ತಿದ್ದಂತೆಯೇ ಕುಸಿದು ಹೋಯಿತು......

W.T.C ಇತಿಹಾಸದ ಮರೆಗೆ ಸರಿದು ಹೋಗಿತ್ತು.

ಅಂದು ಅಲ್ಲಿ ಸಾವನ್ನಪ್ಪಿದವರಿಗೆ, ಭಾರತ, ಇರಾಕ್, ಇಸ್ರೇಲ್, ಲೆಬನಾನ್ ಗಳನ್ನೂ ಸೇರಿಸಿ ಭೂಮಿಯ ಎಲ್ಲೆಡೆ ಇಂಥಾ "ಕುರುಡು ಬೆಂಕಿ" ಗೆ ಸಿಕ್ಕು ಸಾವನ್ನಪ್ಪುತ್ತಿರುವ ಮುಗ್ಧ ಸಾಮಾನ್ಯ ಜನಕ್ಕೆ, ಅವರ ಹೆತ್ತವರಿಗೆ, ಪ್ರಿಯರಿಗೆ.....

ಇದೋ ಕಣ್ಣ ಹನಿಗಳ ತರ್ಪಣ.....


Sunday, September 10, 2006

ನದಿ ತಂದ "ಅಮ್ಮನ ನೆನಪು...."


ಹರಿಯುವ ನದಿಯಿದೆ ಅಲೆ ಹೊರಲಾಗಿ

ಅರಳಿದ ಅಮ್ಮನ ಜಡೆಯಂತೆ....

ಮೋಡವ ಕುಣಿಸುವ ಬೆಟ್ಟ ಕಾಣುತಿದೆ

ಕೂಸ ಮಲಗಿಸುವ ತೊಡೆಯಂತೆ....

-ಎಚ್ಚೆಸ್ವಿ

ಅಮ್ಮನ ಅರಳಿದ ಜಡೆಯ ನೆನಪು ತಂದಿದ್ದು `ಸ್ನೇಕ್ ರಿವರ್'.

ಮೋಡದ ಕೂಸನ್ನು ಜೋಗುಳ ಹಾಡಿ ಮಲಗಿಸುತ್ತಿರುವ ತೊಡೆ `ಗ್ರ್ಯಾಂಡ್ ಟಿಟಾನ್ ಪರ್ವತ ಮಾಲೆಯದ್ದು'.

Saturday, September 09, 2006

"ಬೆಳ್ಳನೆ ಬೆಳಗಾಯಿತು...."

"ಬೆಳ್ಳನೆ ಬೆಳಗಾಯಿತು..." ಹೆಸರಾಂತ ಹಿಂದಿಗಾಯಕಿ ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡಿರುವ ಹಾಡು `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ' ಸಿನಿಮಾದ್ದು. ಕಪ್ಪು-ಬಿಳುಪುನಲ್ಲಿರುವ ಸಿನಿಮಾವನ್ನು ಲತಾರ ಈ ಹಾಡಿಗೋಸ್ಕರ ನೋಡಿದವರು ಹಲವರಿದ್ದಾರೆ.ಈಗ್ಗೆ ಕೆಲವು ವರ್ಶಗಳ ಹಿಂದೆ ದೂರದರ್ಶನದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಸಾರವಾದಾಗ ನಾನು ಲತಾ ಹಾಡಿಗಾಗಿಯೇ ಸಿನಿಮಾ ನೋಡಿದೆ .ತಾರಾಗಣದಲ್ಲಿ ಉತ್ತರಕರ್ನಾಟಕದ ನಟರುಗಳೇ ಬಹಳವಿರುವ ಈ ಸಿನಿಮಾ ಕಿತ್ತೂರಿನ ಸ್ವಾತಂತ್ರ್ಯ ಹೋರಾಟದ ಕಥೆ ಹೊಂದಿದೆ.ಈ ಹಾಡಲ್ಲದೇ `ಎಲ್ಲಾರ ಇರುತಿರು...ಎಂದಾರ ಬರುತಿರು...' ಎಂಬ ಇನ್ನೊಂದು ಹಾಡನ್ನೂ ಈ ಸಿನಿಮಾದಲ್ಲಿ ಲತಾ ಹಾಡಿದ್ದರೂ `ಬೆಳ್ಳನೆ ಬೆಳಗಾಯಿತು' ಹಾಡೇ ಜನಪ್ರಿಯ.
ಆದರೆ ನಾನು ಹಾಕಿರುವ ಮೇಲಿನ ಚಿತ್ರದಲ್ಲಿ ಬೆಳ್ಳನೆ ಬೆಳಗಾಗಿದ್ದು, ಅಮೇರಿಕಾದ ವಯೋಮಿಂಗ್ ರಾಜ್ಯದಲ್ಲಿ!

Friday, September 08, 2006

ರುಕಿ...ರುಕ್ಕು...ರುಕ್ಕಮ್ಮಾ.....

ಇವಳು ನಮ್ಮಮನೆಯ ಅಕ್ವೇರಿಯಂನ ರಾಣಿ ರುಕ್ಕು.ರುಕಿ ತನ್ನ ಮುದ್ದಾದ ಬೀಸಣಿಗಯ ಬಾಲವನ್ನು ಅತ್ತಿತ್ತ ವಯ್ಯಾರದಿಂದ ಬಳುಕಿಸುತ್ತಾ ಓಡಾಡುವುದನ್ನು ನೋಡುತ್ತಿದ್ದರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ.
ಇವಳಿಗೆ `ರುಕ್ಕು'ಹೆಸರಿಟ್ಟದ್ದು ಹೇಗೆಂದರೇ.....
ಗೋಲ್ಡ್ ಫಿಶ್ ಗಳಲ್ಲಿ Ryukin ಎಂದು ಕರೆಯುವ ವರ್ಗಕ್ಕೆ ಸೇರಿದ ಇವಳಿಗೆ ಶಾರ್ಟ್ ಅಂಡ್ ಸ್ವೀಟ್ ಆಗಿ `ರುಕಿ 'ಅಂತ ನಾವು ಕರೆಯುವುದು ಇವಕ್ಕೆ ಜಪಾನೀಸ್ ಫ್ಯಾನ್ ಟೇಲ್ ಎಂದೂ ಕರೆಯುತ್ತಾರೆ.ವೆಡಿಂಗ್ ವೇಲ್ ನಂತೆ ಉದ್ದ ಬಾಲ ಇರುವುದರಿಂದ ಇವಕ್ಕೆ `ವೇಲ್ ಟೇಲ್ 'ಎಂಬ ಹೆಸರೂ ಇದೆ.ಇವು ಅಕ್ವೇರಿಯಂಗೆ ಬಹು ಸುಲಭವಾಗಿ ಹೊಂದಿಕೊಳ್ಳುತ್ತವೆ. ಸೋ ಹೊಸದಾಗಿ ಮೀನು ಸಾಕುವವರು Ryukin ನ ಆಯ್ದುಕೊಳ್ಳಬಹುದು.Ryukin ಗಳು ಈಜುವುದರಲ್ಲಿ ಬಲು ಗಟ್ಟಿಗರು.ನಮ್ಮ ರುಕ್ಕಮ್ಮನ ಈ ಫೋಟೋ ತೆಗೆಯಲು ನಾನು ಹರಸಾಹಸ ಪಡಬೇಕಾಯಿತು ಆದರೆ ಅವಳ ಸೌಂದರ್ಯದ ಫಿಫ್ಟಿ ಪರ್ಸೆಂಟೂ ಈ ಫೋಟೊ ತೋರುವುದಿಲ್ಲಾ ಎಂಬ ಅತೃಪ್ತಿ ನನಗೆ.
`ದಮ್ಮರೆ ದಮ್ಮಮ್ಮ...ನಾನ್ ಡಿಸ್ಕೋ ರುಕ್ಕಮ್ಮ...ಥಕ್ಕ ಥಕಧಿಮಿ ಥಕ್ಕ ಥಕದಿಮಿ ಕುಣಿಸೋ ಪ್ರಿಯತಮ...' ಎಂದು ಹಾಡಲು ನಮ್ಮ ರುಕ್ಕಮ್ಮನಿಗೆ ಪ್ರಿಯತಮನೇ ಇಲ್ಲ. ಸದ್ಯದಲ್ಲೇ ತರೋಣಾ ಅಂತ ಯೋಚಿಸುತ್ತಿದ್ದೇನೆ.ನಿಮಗೆ ಯಾರಾದರೂ ಒಳ್ಳೇ ಹುಡುಗ ಗೊತ್ತಾ?

Thursday, September 07, 2006

Twee ಲ್ಯಾಂಡ್ ನ "Twee Twee"

ಮೊನ್ನೆ ಫಾರ್ಮರ್ಸ್ ಮಾರ್ಕೆಟ್ ಎಂದು ಕರೆಸಿ ಕೊಳ್ಳುವ ಸಂತೆಗೆ ತರಕಾರಿ ತರಲು ಹೋಗಿದ್ದೆ ತರಕಾರಿ ಕೊಂಡು ಮನೆಕಡೆ ಹೊರಟಾಗ ಕಂಡಿದ್ದು ಈ Twee Twee. ಸುತ್ತಾ ಮಕ್ಕಳನ್ನು ಕೂರಿಸಿ ಕೊಂಡು Twee Twee ಭಾಷೆಯಲ್ಲಿ ಮಾತಾಡುತ್ತಾ ಬೆಲೂನ್ ಗೊಂಬೆಗಳನ್ನು ಮಾಡಿ ಮಾರುತ್ತಿದ್ದ ಗೊಂಬೆ ಕೊಂಡ ಮಕ್ಕಳಿಗೂ, ಕೊಳ್ಳದ ಮಕ್ಕಳಿಗೂ ಒಂದೇ ರೀತಿಯಲ್ಲಿ ಕಿಚಾಯಿಸಿ ನಗಿಸುತ್ತಿದ್ದ. ಇನ್ ಫ್ಯಾಕ್ಟ್ ತರಕಾರಿ ಕೊಳ್ಳಲು ಬಂದವರು ತಮ್ಮ ಮಕ್ಕಳನ್ನು ಅವನ ಹತ್ರ ಬಿಟ್ಟು ತಾವು ಆರಾಮವಾಗಿ ಶಾಪಿಂಗ್ ಮುಗಿಸಿ ಬರುವವರೆಗೆ ಅವನು ಫ್ರೀ ಬೇಬಿ ಸಿಟಿಂಗ್ ಮಾಡಿತ್ತಿದ್ದನೆನ್ನ ಬಹುದು.(ಇಲ್ಲಿ ಬೇಬಿಯನ್ನು ಸಿಟ್ ಮಾಡಲು ಗಂಟೆ ಲೆಕ್ಕದಲ್ಲಿ ದುಡ್ಡು ದೋಚುತ್ತಾರೆ!)
ನಾನೂ ಹತ್ತು ನಿಮಿಷ ನಿಂತು ಅವನ` ಷೋ' ನೋಡಿ ಒಂದು ಫೋಟೋ ತೆಗೆದುಕೊಳ್ಳಲೇ ಎಂದು ಕೇಳಿದಾಗ ನನ್ನ ಕ್ಯಾಮೆರಾ ಕಿತ್ತುಕೊಂಡು ತನ್ನ Twee Twee ಭಾಷೆಯಲ್ಲಿ ಥ್ಯಾಂಕ್ಸ್ ಹೇಳಿಬಿಟ್ಟ! ನಾನು ಸಪ್ಪೆ ಮೂತಿ ಮಾಡಿಕೊಂಡಂತೆ ನಟಿಸಿದಾಗ ನನಗೆ ನನ್ನ ಕ್ಯಾಮರವನ್ನೂ ,ನನ್ನ ಕ್ಯಾಮರಾಕ್ಕೆ ಈ ಪೋಸನ್ನೂ ಕೊಟ್ಟ.

Wednesday, September 06, 2006

ಗಾನ ಗಾಂಧಾರಿಯ `ಬದುಕಿನ ಹಾಡು'

ಪ್ರಖ್ಯಾತ ಹಿಂದುಸ್ತಾನಿ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಅವರ ಅತ್ಮಕಥೆ`ನನ್ನ ಬದುಕಿನ ಹಾಡು'ಪುಸ್ತಕವನ್ನು ಇತ್ತೀಚೆಗೆ ಓದಿದೆ. ಎನ್ಕೆ ಅವರು ಸೊಗಸಾಗಿ ನಿರೂಪಿಸಿರುವ ಈ ಪುಟ್ಟ ಪುಸ್ತಕ ಹಲವಾರು ಹೃದಯಸ್ಪರ್ಶಿ ವಿವರಗಳಿಂದ ಕೂಡಿದೆ ಅವುಗಳಲ್ಲೊಂದು ಹೀಗೆ...
ಹೆಚ್,ಎಮ್ .ವಿ ಮ್ಯೂಸಿಕ್ ಕಂಪನಿಯವರು ಗಂಗೂಬಾಯಿಯವರ ಗಾನ ಮುದ್ರಿಕೆಯನ್ನು ಹೊರ ತಂದಾಗ ಇವರು ಹುಬ್ಬಳ್ಳಿಯವರಿರಬೇಕು ಎಂದುಕೊಂಡು ಮುದ್ರಿಕೆಗಳ ಮೇಲೆ`ಗಂಗೂಬಾಯಿ ಹುಬಳೀಕರ್' ಅಂತ ಮುದ್ರಿಸಿದ್ದರು.ಅದನ್ನು ನೋಡಿ ಗಂಗೂ ಬಾಯಿಯವರ ಸೋದರಮಾವ `ಹಾನಗಲ್ ಬಿಟ್ಟು ಹುಬಳೀಹರ್ ಅಂತಾ ಬದಲಿಸಿದ್ದೀಕೆ? ನಾವು ಹಾನಗಲ್ ದವರು ಎಂಬ ಅಭಿಮಾನ ಬ್ಯಾಡೇನು?' ಅಂತಾ ತಮ್ಮೂರಿನ ಮೇಲಿನ ಪ್ರೀತಿಯಿಂದ ಆಕ್ಷೇಪಿಸಿದರಂತೆ. ಅದಕ್ಕೆ ಮುಂದಿನ ಬಾರಿ ಧ್ವನಿ ಮುದ್ರಿಸಲು ಮುಂಬೈಗೆ ಹೋದಾಗ ಗಂಗೂಬಾಯಿಯವರು`ಹುಬಳೀಕರ್ ಬ್ಯಾಡಾ' ಅಂತ ಹೇಳಿದರು ಈಗ ಹೆಸರು ಬದಲಿಸಿದರೆ ವ್ಯಾಪಾರಕ್ಕೆಲ್ಲಿ ಅಡ್ಡಿಯಾಗುತ್ತೋ ಎಂದು ಬದಲಿಸುವುದಾದರೆ ಹೆಸರನ್ನೂ ಬೇರೆ ಇಡೋಣಾ ಅಂತ ಹೆಚ್.ಎಮ್.ವಿ ಕಂಪನಿಯವರು ಗಂಗೂಬಾಯಿಯವರ ಜನ್ಮನಾಮವಾದ `ಗಾಂಧಾರಿ' ಎಂಬುದನ್ನು ಅನುಸರಿಸಿ `ಗಾಂಧಾರಿ ಹಾನಗಲ್' ಎಂದು ಬದಲಿಸಿ ಬಿಟ್ಟರು!
ಮುಂದಿನ ಹಲವಾರು ವರ್ಷಗಳು ಸಂಗೀತ ಗಂಗೆಯನ್ನು ಹರಿಸಲಿದ್ದ ಅವರಿಗೆ`ಗಂಗೂಬಾಯಿ ಹಾನಗಲ್' ಎಂದು ಅಧಿಕೃತವಾಗಿ ಘೋಷಿಸಿದ್ದು ಆಲ್ ಇಂಡಿಯಾ ರೇಡಿಯೋ! ಏ.ಐ.ಆರ್ ಪ್ರಥಮ ಬಾರಿಗೆ` ಗಂಗೂ ಬಾಯಿ ಹಾನಗಲ್' ಎಂದು ಘೋಷಿಸಿದ ಕಾರ್ಯಕ್ರಮದಲ್ಲಿ ಗಂಗೂಬಾಯಿಯವರು ಅವರ ಗುರುಗಳಿಂದ ಕಲಿತ `ಮಿಯಾ ಕಿ ಮಲ್ಹಾರ್' ರಾಗವನ್ನು ಅದ್ಬುತವಾಗಿ ಹಾಡಿ ಬಹಳ ಜನಪ್ರಿಯರಾಗಿ ಹೋಗಿದ್ದರಿಂದ ಮುಂದೆ ಅದೇ ಹೆಸರೇ ಅವರಿಗೆ ಖಾಯಂ ಆಯಿತು.

Tuesday, September 05, 2006

ಕೋಡುಬಳೆ


ನಿನ್ನೆಯ ಪೋಸ್ಟ್ ನ ತಲೆಬರಹ ನೋಡಿ ಅರವಿಂದ ಆ ಹಾಡನ್ನು ಚಿಕ್ಕಂದಿನಲ್ಲಿ ತನ್ನ ಸ್ವಂತ ರೀತಿಯಲ್ಲಿ ಹಾಡುತ್ತಿದ್ದುದನ್ನು ನೆನಪಿಸಿಕೊಂಡ ಅದು ಹೀಗೆ...``ಆಡು ಬಾ ಕೋಡ್ ಬಳೇ...ನಲಿದಾಡು ಬಾರೆ ಚಕ್ಕುಲೀ...' ಆ ಹಾಡು ಕೇಳಿ ನನಗೆ ಬಾಯಲ್ಲಿ ನೀರೂರಿ ಬಿಟ್ಟಿತು! ಮನೆಯಲ್ಲಿದ್ದ ಕೋಡುಬಳೆ ಅಂಡ್ ಚಕ್ಕುಲಿಯ ಲಾಸ್ಟ್ ಕಂತು ತಟ್ಟೆಗೆ ಹಾಕಿಕೊಂಡು ನಾಲಿಗೆಯ ಮೇಲೆ ನಲಿದಾಡಿಸುತ್ತಾ ಇದನ್ನು ಬರೆಯುತ್ತಿದ್ದೇನೆ.ನಾನು ಕೆಳಗೆ ಕೊಡಲಿರುವುದು ಅಂತಿಂಥಾ ರೆಸಿಪಿ ಅಲ್ಲಾ...ನಮ್ಮಮ್ಮನ ಸೆವೆರಲ್ ಟೈಮ್ಸ್ `ಟ್ರೈಡ್ ಅಂಡ್ ಟೆಸ್ಟೆಡ್' ರೆಸಿಪಿ!
ಬಹಳಾ ಅಥೆಂಟಿಕ್ ರೆಸಿಪಿ ಇದು ಓದುವಂತವರಾಗಿ.....

ರುಚಿ ರುಚಿ ಕೋಡು ಬಳೆ
---------------
ಬೇಕಾದ ಸಾಮಾಗ್ರಿಗಳು-ಅಕ್ಕಿ ಹಿಟ್ಟು-4 ಕಪ್, ಸಣ್ಣ (ಚಿರೋಟಿ)ರವೆ-1 ಕಪ್, ವನಸ್ಪತಿ-3/4 ಕಪ್, 1/2 ಹೋಳು ತೆಂಗಿನಕಾಯಿ ತುರಿ, 20 ಒಣ ಮೆಣಸಿನ ಕಾಯಿ (ಬ್ಯಾಡಗಿ) ಕಡಲೇ ಕಾಳು ಗಾತ್ರದ ಇಂಗು, ರುಚಿಗೆ ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ-
ಅಕ್ಕಿ ಹಿಟ್ಟು, ಸಣ್ಣ ರವೆ ಎರಡನ್ನೂ ಜರಡಿಯಾಡಿ ವನಸ್ಪತಿ ಕರಗಿಸಿ ಅದಕ್ಕೆ ಹಾಕಿ ಕಲೆಸಿ 1ಘಂಟೆ ಕಾಲ ಮುಚ್ಚಿಡಿ.ತೆಂಗಿನತುರಿ,ಒಣ ಮೆಣಸಿನ ಕಾಯಿ ಮತ್ತು ಇಂಗನ್ನು ಮಿಕ್ಸಿಯಲ್ಲಿ ರುಬ್ಬಿ.ಈ ಮಿಶ್ರಣವನ್ನು ಹಿಟ್ಟಿಗೆ ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.ಒಂದು ಅಥವಾ ಎರಡು ಒಬ್ಬೆಗಳಿಗಾಗುವಷ್ಟು ಹಿಟ್ಟಿಗೆ ಮಾತ್ರ ಸ್ವಲ್ಪವೇ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.ಎಲ್ಲಾ ಹಿಟ್ಟನ್ನೂ ಒಮ್ಮೆಗೇ ಕಲಸಿ ಇಡಬೇಡಿ.ಸ್ಟೀಲ್ ತಟ್ಟೆಯೊಂದನ್ನು ಬೋರಲು ಹಾಕಿ ಸ್ವಲ್ಪ ಎಣ್ಣಿ ಹಚ್ಚಿ ನಿಂಬೆ ಗಾತ್ರದ ಹಿಟ್ಟನ್ನು ಕೋಡುಬಳೆ ಆಕಾರದಲ್ಲಿ ಹೊಸೆಯಿರಿ.ಅಗಲ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಕೋಡುಬಳೆಗಳನ್ನು ಕರೆಯಿರಿ.ಸಂಜೆ ಟೀ ಜೊತೆಗೆ ಮೆದ್ದರೆ ಆಹಾ! ಅಂತ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಇರುತ್ತೆ!

Monday, September 04, 2006

ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ...

ಹಾಡು ಬಾ ಕೋಗಿಲೆ..ನಲಿದಾಡು ಬಾರೆ ನವಿಲೇ...' ಹಾಡನ್ನು ಚಿಕ್ಕಂದಿನಲ್ಲಿ ಕೇಳಿದ್ದು.ಈ ಹಾಡು ನೆನಪಾಗಿದ್ದು ಉತ್ತರ ಕ್ಯಾಲಿಫೋರ್ನಿಯದ ಯುಕಿಯಾ ಎಂಬ ಊರಿನ ಬುದ್ದ ಮಂದಿರದಲ್ಲಿ ಈ ನವಿಲನ್ನು ಕಂಡಾಗ.
ನವಿಲುಗಳಲ್ಲಿ ಎರಡು ಜಾತಿಯವನ್ನು ಜೀವಶಾಸ್ತ್ರದ ವಿಜ್ಞಾನಿಗಳು ಗುರುತಿಸುತ್ತಾರೆ.ನೀಲಿ ಮೈಹೊಂದಿದ ಇಂಡಿಯನ್ ಪೀಕಾಕ್, ಹಸಿರಾದ ಬರ್ಮೀಸ್ ಪೀಕಾಕ್.ಆದರೆ ನವಿಲು ಅಂತಾ ಜಗತ್ತೆಲ್ಲಾ ಕರೆಯುವುದು ನಮ್ಮ ನವಿಲನ್ನೇ. ಈಗೇನೋ `ಕಾಂಗೋ ಪೀಕಾಕ್' ಎಂಬ ಮೂರನೇ ಜಾತಿಯನ್ನು ಆಫ್ರಿಕಾದಲ್ಲಿ ಗುರುತಿಸಿದ್ದಾರಂತೆ.
ತಮ್ಮ ಮತ್ತು ನವಿಲಿನ ಚಿಕ್ಕಂದಿನ ಒಡನಾಟವನ್ನು ನಮ್ಮ ಸುಪ್ರಸಿದ್ದ ಕಾದಂಬರಿಕಾರ ಆರ್.ಕೆ.ನಾರಾಯಣ್ ತಮ್ಮ ಆತ್ಮಕಥೆ `ಮೈ ಡೇಸ್'ನಲ್ಲಿ ತುಂಬಾ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಅವರ ಅಮ್ಮನಿಗೆ ಅನಾರೋಗ್ಯವಾಗಿದ್ದರಿಂದ ಬಾಲಕ ನಾರಾಯಣ್ ಅಜ್ಜಿ ಮನೆಯಲ್ಲಿ ಬಾಲ್ಯ ಕಳೆಯಬೇಕಾಯಿತಂತೆ. ಚಿಕ್ಕ ಹುಡುಗನನ್ನು ತಾಯಿಯಿಂದ ಬಿಡಿಸಿ ಕರೆದುಕೊಂಡು ಬಂದಿದ್ದೇವೆ ಎಂಬ ಕನಿಕರಕ್ಕೋ ಏನೋ ಅವರ ಮಾವ ಅವರಿಗೆ ಆಡಲು ಒಂದು ನವಿಲು ಮತ್ತು ಒಂದು ಕೋತಿ ತಂದು ಕೊಟ್ಟಿದ್ದರಂತೆ.ಒಮ್ಮೆ ಬಾಲಕ ನಾರಾಯಣ್ ಬೀದಿಬಾಗಿಲಲ್ಲಿ ತಮ್ಮ ನವಿಲಿನೊಡನೆ ನಿಂತಿದ್ದಾಗ ನೆರೆಯ ಹುಡುಗನೊಬ್ಬ `ನನಗೊಂದು ಗರಿ ಕೊಡೋ' ಅಂತ ಕೇಳಿದನಂತೆ.ಇವರು `ನನ್ನ ಹತ್ರ ಹೇಗೂ ಇಡೀ ನವಿಲೇ ಇದ್ಯಲ್ಲಾ ಒಂದು ಗರಿ ಹೋದರೇನೀಗಾ 'ಅಂತ ದೊಡ್ಡ ದಾನಶೂರ ಕರ್ಣನ ಪೋಸು ಕೊಡುತ್ತಾ`ನಿಂಗೆ ಯಾವುದ್ ಬೇಕೋ ನೀನೇ ಕಿತ್ಕೋ'ಅಂತ ಹೇಳಿದರಂತೆ. ಆ ಹುಡುಗ ಗರಿಗೆ ಕೈ ಹಾಕಿದ್ದೇ ತಡ, ನವಿಲು ವಿಪರೀತ ಕೋಪ ಮಾಡಿಕೊಂಡು ಹುಡುಗನ ಕೈ ತೂತಾಗುವಂತೆ ಕುಕ್ಕಿಬಿಟ್ಟಿತಂತೆ. ಆಗ ನಾರಾಯಣ್ ಅವರ ಅಜ್ಜಿ ಓಡಿ ಬಂದು ಆ ಬಡಪಾಯಿ ಹುಡುಗನ ಕೈಗೆ ಪಟ್ಟಿ ಕಟ್ಟಿ ಆರೈಕೆ ಮಾಡಿದರಂತೆ.

Sunday, September 03, 2006

"ಲ್ಯಾಂಬೋರ್ಗಿನಿ.......!"

ಬೆಂಗಳೂರಿಂದ ಬೇ ಏರಿಯಾಕ್ಕೆ ಬಂದಿದ್ದ ನಮ್ಮ ಬಳಗದ ಹುಡುಗನೊಬ್ಬನನ್ನು ಸುತ್ತ-ಮುತ್ತಲಿನ ಜಾಗಗಳನ್ನು ತೋರಿಸುತ್ತಾ ಪೆಸಿಫಿಕ್ ಸಾಗರ ತೀರದ`ಕಾರ್ಮೆಲ್' ಎಂಬ ಜಾಗಕ್ಕೆ ಕರಕೊಂಡು ಹೋಗಿದ್ದೆವು. ನೀಲಿ ಸಾಗರದ ಹಿನ್ನಲೆಯಲ್ಲಿ ಯಾವುದೋ ಆಟೋ `ಮ್ಯಾಗ್ ಝೇನ್' ಗಾಗಿ `ಆಡ್ ಶೂಟಿಂಗ್' ನಡೀತಿತ್ತು. ಯಾರಾದರೂ ಸ್ಟಾರ್ ಕಾಣುತ್ತಾರಾ ಅಂತ ನಾವು ಇಣುಕಿದಾಗ ಕಂಡ `ಸ್ಟಾರ್' ಈ "ಲ್ಯಾಂಬೋರ್ಗಿನಿ!" ಇವಳನ್ನು ನೋಡಿ ನಮ್ಮ ಹುಡುಗ ಫುಲ್ ಫ್ಲ್ಯಾಟ್!
`ಇದೇನು ಒಳ್ಳೇ ನಂದಿನಿ...ಶಾಲಿನಿ...ಮಂದಾಕಿನಿ... ತರ ಇದೆಯಲ್ಲಾ ...' ಅಂತಾ ನಾನು ತಮಾಶೆ ಮಾಡಿದ್ದಕ್ಕೆ ಕಾರುಗಳ ಬಗೆಗಿನ ನನ್ನ ಅಜ್ಞಾನಕ್ಕೆ ಮರುಕ ಪಡುತ್ತಾ "ನಂದಿನಿ,ಶಾಲಿನಿ,ಕೊನೆಗೆ ಮಂದಾಕಿನಿ ಬೇಕಾದ್ರೂ ಸಿಗ್ಬಹುದೇನೋ...ಆದರೆ ಇಂಥಾ ಲ್ಯಾಂಬೋರ್ಗಿನಿ ಸಿಗುತ್ತಾಳಾ..."ಎನ್ನುವಂತೆ ನನ್ನ ಮುಖ ನೋಡಿದ, ಬಿ.ಇ.ಮುಗಿಸಿ ಇನ್ನೂ ಒಂದು ವರ್ಷವೂ ಆಗಿರದ ನಮ್ಮ ಬೆಂಗಳೂರಿಗ.`ಇದಕ್ಕೆ ಎಷ್ಟಾಗುತ್ತೇ...?'ಅಂತಾ ನಾನು ಮೆಲ್ಲಗಿನ ಧ್ವನಿಯಲ್ಲಿ ಅರವಿಂದನ್ನ ಕೇಳಿದೆ.`ಮಾಡೆಲ್ ಅನುಸರಿಸಿ $ 125,000 ರಿಂದ ಶುರುವಾಗಿ $375,000 ತನಕ ಆಗುತ್ತೆ ಅಂತ ಉತ್ತರ ಬಂತು!.45ರಿಂದ ಅರವಿಂದ ಹೇಳಿದ ಸಂಖ್ಯೆಯನ್ನು ಗುಣಿಸಲು ತಲೆಯಲ್ಲಿ ಓಪನ್ ಮಾಡಿದ್ದ `ವಿಂಡೋ'ನ್ನ ಶಟ್ಟಿಸಿ ನಾನು ತೆಪ್ಪಗಾದೆ.

Saturday, September 02, 2006

ಶ್ಯಾಂಡಿಲಿಯರ್ ಟ್ರೀ


ಸ್ಯಾನ್ ಫ್ರ್ಯಾನ್ಸಿಸ್ಕೋ ದಿಂದ ಉತ್ತರಕ್ಕಿರುವ ಲೆಗೆಟ್ ಎಂಬ ಊರಿನ ಹತ್ತಿರ `ಶ್ಯಾಂಡಿಲಿಯರ್ ಟ್ರೀ' ಅಂತ ಮುದ್ದಾಗಿ ಕರೆಸಿಕೊಳ್ಳುವ ಈ `ಕ್ಯಾಲಿಫೋರ್ನಿಯ ರೆಡ್ ವುಡ್ ಟ್ರೀ' ಇದೆ. 315 ಅಡಿ ಎತ್ತರ ಹೊಂದಿ, ಭವ್ಯವಾಗಿ ನಿಂತಿರುವ ಇದರ ಬುಡ ವನ್ನು ಕೊರೆದು ಮಾಡಿರುವ ಸುರಂಗದಲ್ಲಿ ಒಂದು ದೊಡ್ಡ ಕಾರ್ ಆರಾಮವಾಗಿ ತೂರಬಹುದು.ನಮ್ಮ s.u.v.ಎಷ್ಟು ಸಲೀಸಾಗಿ ಹಾದು ಬರುತ್ತಿದೆ ನೋಡಿ. ಅಚ್ಚರಿ ಏಕೆ? ಬುಡದ ವ್ಯಾಸ(Diameter) 21 ಅಡಿ ಇರುವಾಗ ಕಷ್ಟ ಪಟ್ಟೇನೂ ತೂರಲಿಲ್ಲ ಬಿಡಿ! ಅಂದ ಹಾಗೆ ಈ ಅಜ್ಜನ ವಯಸ್ಸು ಎಷ್ಟು ಗೊತ್ತೇ? ಕೇವಲ 2400 ವರ್ಷಗಳು !!

ಕ್ಯಾಲಿಫೋರ್ನಿಯ ಪಾಪಿ california poppy


ಇದು ಕ್ಯಾಲಿಪೋರ್ನಿಯ ಪಾಪಿ (california poppy) ಕನ್ನಡದ ಪಾಪಿಯಲ್ಲ ಮತ್ತೆ! ನೀವು ಬೇಕಾದ್ರೆ` ಪೋಪಿ' ಅಂತ ಹೇಳಿಕೊಳ್ಳಿ.(ನಾನು ಹೇಳುವ ಹಾಗೆ!) ಈ`ಸುಂದ್ರಿ' ಕ್ಯಾಲಿಪೋರ್ನಿಯದ ರಾಜ್ಯಪುಷ್ಪ ಎಂದು ಘೋಷಿತವಾಗಿದ್ದು 1903 ರಲ್ಲಿ.ಗೋಲ್ಡನ್ ಸ್ಟೇಟ್ ಎಂದೇ ಕರೆಸಿಕೊಳ್ಳುವ ಕ್ಯಾಲಿಫೋರ್ನಿಯದ ಗೋಲ್ಡನ್ ಇಮೇಜ್ ಗೆ ಪೂರಕವಾಗಿ ಚಿನ್ನದ ಬಣ್ಣದ ಹೂ ಅರಳಿಸಿ ನಗುವ ಕಾರಣದಿಂದಾಗಿಯೇ ಇವಳು ತನ್ನ ಇತರ ಗೆಳತಿಯರನ್ನು ಹಿಂದೆ ಹಾಕಿ ಈ ಸ್ಥಾನ ಗಿಟ್ಟಿಸಿಕೊಂಡಳಂತೆ. ಪ್ರತಿ ವರ್ಶ ಏಪ್ರಿಲ್ 6 ರಂದು `ಕ್ಯಾಲಿಫೋರ್ನಿಯ ಪಾಪಿ ಡೇ' ಅಂತ ಆಚರಿಸುತ್ತಾರೆ. ಮಾದಕ ವಸ್ತುಗಳನ್ನು ಉತ್ಪಾದಿಸಲು ಮೂಲಸಾಮಗ್ರಿ ಒದಗಿಸಿ ಎಲ್ಲರಿಂದಲೂ ಬೈಸಿಕೊಳ್ಳುವ ನಿಜವಾದ` ಪಾಪಿ ' ಅರ್ಥಾತ್ ಗಸಗಸೆ ಗಿಡವೂ (Opium poppy=papaver somniferum ) ಕ್ಯಾಲಿಫೋರ್ನಿಯ ಪಾಪಿಯೂ (california poppy= Eschschotzia californica ) ಒಂದೇ ಕುಟುಂಬಕ್ಕೆ ಸೇರಿದವರು.ಆದರೆ ನಮ್ಮ ಈ ಪಾಪಿಯ ಮಾದಕತೆ ಅವಳ ಸೌಂದರ್ಯಕ್ಕಷ್ಟೇ ಸೀಮಿತವಾಗಿದೆ . ಪಾಪಿ ಹೂ ಸಾಮಾನ್ಯವಾಗಿ ಕಿತ್ತಳೆ ಬಣ್ಣದ್ದಾಗಿರುತ್ತೆ.ಅರಿಸಿನ ಹಳದಿಯದೂ, ತಿಳಿ ಕೆನೆ ಬಣ್ಣದ್ದೂ ಸ್ವಲ್ಪ ಅಪರೂಪ. ವಸಂತದಲ್ಲಿ ಈ `ಪಾಪಿ' ಗಳದ್ದೇ ಕಾರುಭಾರು ಇಲ್ಲಿನ ಬೆಟ್ಟ-ಗುಡ್ಡಗಳ ತುಂಬಾ......

Ganapathi Pooje


Ganapathi Pooje at our house